ಯಲಹಂಕ: ‘ಅರಣ್ಯ ಹಾಗೂ ಅರಣ್ಯೇತರ ಜಮೀನಿನಲ್ಲಿ ಬಿದಿರು ಬೆಳೆಸಲು, ಉತ್ಪನ್ನಗಳ ತಯಾರಿಕೆ, ಮಾರಾಟ ಹಾಗೂ ತರಬೇತಿ ಮತ್ತಿತರ ಕಾರ್ಯಗಳಿಗೆ ರೂ25 ಕೋಟಿ ಯೋಜನೆಯನ್ನು ಸಿದ್ಧಪಡಿಸಿ ‘ರಾಷ್ಟ್ರೀಯ ಬಿದಿರು ಮಿಷನ್’ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಬ್ಯಾಂಬೂ ಸೊಸೈಟಿ ಇಂಡಿಯಾದ ಅಧ್ಯಕ್ಷ ಡಾ.ಕೆ.ಸುಂದರ್ ನಾಯ್ಕ ಅವರು ಹೇಳಿದರು.
ಜಕ್ಕೂರಿನಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಹಸಿರು ನಿರ್ಮಾಣ ವಸ್ತುಗಳು ಮತ್ತು ತಂತ್ರಜ್ಞಾ ನ ಕೇಂದ್ರದ ಸಹಯೋಗದಲ್ಲಿ ‘ವಿಶ್ವ ಬಿದಿರು ದಿನಾಚರಣೆ’ ಅಂಗವಾಗಿ ಬಿದಿರಿನ ಉತ್ಪನ್ನಗಳು ಕುರಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಯೋಜನೆಯಡಿಯಲ್ಲಿ ರೈತರು ಸಸಿ ನೆಡಲು, ಮಹಿಳಾ ನರ್ಸರಿ ಮತ್ತು ಕಿಸಾನ್ ನರ್ಸರಿ ಅಭಿವೃದ್ಧಿಪಡಿಸಬಹುದಾಗಿದೆ. ಹಾಗೆಯೇ ಬಿದಿರನ್ನು ಹೆಚ್ಚಾಗಿ ಬೆಳೆಸಲು ಪ್ರೇರಣೆ ನೀಡಲು ಬಿದಿರನ್ನು ಹೆಚ್ಚಾಗಿ ಬೆಳೆಯುವ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳಲು ಅಕಾಶವಿದೆ ಎಂದು ತಿಳಿಸಿದರು.
‘ಈ ಹಿಂದೆ ಒಂದು ಎಕರೆ ಪ್ರದೇಶದಲ್ಲಿ ಬಿದಿರು ಬೆಳೆಸಲು ರೂ 8 ಸಾವಿರ ಕೊಡಲಾಗುತ್ತಿತ್ತು. ಈಗ ರೂ 25 ಸಾವಿರ ನೀಡಬೇಕೆಂಬ ಬೇಡಿಕೆ ಬಂದಿದೆ. ಬಿದಿರು ಖರೀದಿಸಲು ಬಿದಿರು ಕೈಗಾರಿಕೆಗಳು ಸೇರಿದಂತೆ ಅಗರಬತ್ತಿ ತಯಾರಿಕಾ ಸಂಘಗಳು ಹಾಗೂ ಮೇದಾರ ಸಮುದಾಯಗಳಿಂದ ಬಹಳ ಬೇಡಿಕೆಯಿದೆ’ ಎಂದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪುನಟಿ ಶ್ರೀಧರ್ ಮಾತನಾಡಿ, ‘ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಬಿದಿರಿನ ತಯಾರಿಕೆ, ಸಂಸ್ಕರಣೆ , ಕರಕುಶಲ ವಸ್ತುಗಳಾದ ಕೀ ಚೈನ್, ಬ್ಯಾಂಗಲ್್ಸ್, ಅಲಂಕಾರಿಕ ವಸ್ತುಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗಿದೆ’ ಎಂದರು.
ಬಿದಿರಿನ ಬಸ್ ನಿಲ್ದಾಣ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕ (ಐಟಿ) ಕುಮಾರ್ ಪುಶ್ಕರ್, ‘ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಜಕ್ಕೂರು ರೈಲ್ವೆ ಕ್ರಾಸಿಂಗ್ ಬಳಿ ರೂ 70 ಸಾವಿರ ವೆಚ್ಚದಲ್ಲಿ ಬಿದಿರಿನಿಂದ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಇದರಿಂದ ಹಣದ ಉಳಿತಾಯದ ಜೊತೆಗೆ ದೀರ್ಘ ಕಾಲದವರೆಗೆ ಬಾಳಿಕೆ ಬರಲಿದ್ದು, ಪರಿಸರ ಸ್ನೇಹಿಯೂ ಆಗಿರುತ್ತದೆ. ಕಾಂಕ್ರೀಟ್ ಮತ್ತು ಇತರೆ ಸಾಮಗ್ರಿಗಳಿಂದ ನಿರ್ಮಾಣ ಮಾಡಿದರೆ ರೂ1.25 ಲಕ್ಷ ಖರ್ಚಾಗುತ್ತದೆ’ ಎಂದರು.