ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಮುಚ್ಚುವಿಕೆ ಮತ್ತು ರಿಪೇರಿ ಕಾರ್ಯವನ್ನು ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್ ಅವರು ಗುರುವಾರ ರಾತ್ರಿ ಪರಿಶೀಲನೆ ನಡೆಸಿದರು.
ನಂದಿದುರ್ಗ ರಸ್ತೆಯಲ್ಲಿ ಗುಂಡಿ ಮುಚ್ಚುತ್ತಿದ್ದ ಸ್ಥಳಗಳಿಗೆ ರಾತ್ರಿ 11.30ರ ಸುಮಾರಿಗೆ ಭೇಟಿ ನೀಡಿದ ಅವರು, ಕೆಲಸದ ಗುಣಮಟ್ಟವನ್ನು ಪರಿಶೀಲಿಸಿದರು.
‘ನಿತ್ಯ ಮಳೆ ಸುರಿದಿದ್ದರಿಂದಾಗಿ ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದವು. ಈಗ ಮಳೆ ನಿಂತಿರುವುದರಿಂದ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಮತ್ತು ಹದಗೆಟ್ಟಿರುವ ರಸ್ತೆಗಳನ್ನು ರಿಪೇರಿ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ಕುಮಾರ್ ನಾಯಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾನೂ ಸೇರಿದಂತೆ ರಾತ್ರಿ ವೇಳೆ ನಿತ್ಯ ಒಬ್ಬೊಬ್ಬ ಹಿರಿಯ ಅಧಿಕಾರಿಗಳು, ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇವೆ. ಅಲ್ಲದೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕೆಲಸ ಕೂಡ ಬೇಗನೆ ಆಗುತ್ತದೆ’ ಎಂದರು.
ನಂತರ ರೆಸಿಡೆನ್ಸಿ ರಸ್ತೆ, ಲ್ಯಾವೆಲ್ಲೆ ರಸ್ತೆ, ದೊಮ್ಮಲೂರು, ವಿಕ್ಟೋರಿಯಾ ರಸ್ತೆ ಹಾಗೂ ರಿಚ್ಮಂಡ್ ವೃತ್ತದಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶೇಷ ಆಯುಕ್ತ (ಯೋಜನೆಗಳು) ರವಿಶಂಕರ್, ಪ್ರಧಾನ ಎಂಜಿನಿಯರ್ ಎಂ.ಆರ್. ವೆಂಕಟೇಶ್ ಮತ್ತಿತರರು ಆಯುಕ್ತರ ರಾತ್ರಿ ಪರಿಶೀಲನೆಗೆ ಸಾಥ್ ನೀಡಿದರು.
*