ಬೆಂಗಳೂರು: ಆಸ್ತಿ ತೆರಿಗೆ ಹೆಚ್ಚಳ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರತಿಪಕ್ಷ ಬಿಜೆಪಿಯ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಕೆಂಪೇಗೌಡ ಪೌರಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ವಿಷಯವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿಗೆ ಮಾತು ಬೆಳೆದು ತೀವ್ರ ಗದ್ದಲ ಉಂಟಾಯಿತು.
ಬಿಜೆಪಿ ಸದಸ್ಯರು ಮೇಯರ್ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಸದಸ್ಯರು ಮೇಯರ್ ಪೀಠದತ್ತ ಜಮಾಯಿಸಿದ ವೇಳೆ ನೂಕಾಟದಿಂದಾಗಿ ಗದ್ದಲ ಹೆಚ್ಚಾಯಿತು.
ಸಭೆ ಸುಗಮವಾಗಿ ನಡೆಯಲು ಬಿಜೆಪಿ ಸದಸ್ಯರು ಸಹಕರಿಸಬೇಕೆಂದು ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ ಅವರು ಮಾಡಿದ ಮನವಿಯಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಗದ್ದಲ ನಡೆಸಿದ ಕಾರಣಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಎಂ.ನಾಗರಾಜ್, ಉಮೇಶ್ ಶೆಟ್ಟಿ ಮತ್ತು ರಮೇಶ್ ಕುಮಾರ್ ಅವರನ್ನು ಮೇಯರ್ ಅಮಾನತುಗೊಳಿಸಿದ್ದಾರೆ.