ಬೆಂಗಳೂರು: ಮಲ್ಲೇಶ್ವರ, ಗಾಂಧಿನಗರ ಹಾಗೂ ರಾಜರಾಜೇಶ್ವರಿನಗರ ವಿಭಾಗಗಳಲ್ಲಿ ನಡೆದಿದ್ದ ರೂ1,539ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಅಕ್ರಮದ ಪ್ರಮಾಣ ಕೇವಲ ರೂ 6.09 ಕೋಟಿ ಎಂಬುದು ಸಿಐಡಿ ತನಿಖೆಯಿಂದ ಪತ್ತೆಯಾಗಿದೆ.
ಈ ಸಂಬಂಧ ತನಿಖೆ ನಡೆಸಿರುವ ಸಿಐಡಿ ಕೆಲವು ತಿಂಗಳುಗಳ ಹಿಂದೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ಮಾಹಿತಿ ಒದಗಿಸಿದೆ. ತನಿಖೆ ಇನ್ನೂ ನಡೆಯುತ್ತಲೇ ಇದ್ದು, ಅಂತಿಮ ವರದಿ ಸಿದ್ಧವಾಗಲು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
‘67 ಕಾಮಗಾರಿಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಪೂರ್ಣಗೊಳಿಸಲಾಗಿದ್ದು, ಆ ಕಾಮಗಾರಿಗಳಿಂದ ಬಿಬಿಎಂಪಿಗೆ ರೂ 6.09 ಕೋಟಿ ಆರ್ಥಿಕ ನಷ್ಟವಾಗಿರುವುದು ಪತ್ತೆಯಾಗಿದೆ. 33 ಎಂಜಿನಿಯರ್ಗಳು ಹಾಗೂ 31 ಗುತ್ತಿಗೆದಾರರ ವಿರುದ್ಧ ಒಟ್ಟು 43 ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ದೋಷಾರೋಪ ಪಟ್ಟಿಯಲ್ಲಿ ಅಪರಾಧಿಗಳು ಎಂದು ಗುರುತಿಸಲಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಅಂತಹ ಅಧಿಕಾರಿಗಳನ್ನು ಯಾವುದೇ ನಿರ್ಧಾರ ಕೈಗೊಳ್ಳಲು ಅವಕಾಶ ಇಲ್ಲದಂತಹ ಹುದ್ದೆಗೆ ವರ್ಗ ಮಾಡಬೇಕು ಹಾಗೂ ದೋಷಾರೋಪ ಪಟ್ಟಿಯಲ್ಲಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಸಿಐಡಿ ಡಿಜಿಪಿ ಶಿಫಾರಸು ಮಾಡಿದ್ದಾರೆ. ಆದರೆ, ಡಿಜಿಪಿ ಶಿಫಾರಸಿನಂತೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ.
ಆರು ವರ್ಷಗಳ ಹಿಂದೆ ನಡೆದಿದ್ದ ಈ ಕಾಮಗಾರಿಗಳಲ್ಲಿ ಭಾರಿ ಅಕ್ರಮ ಎಸಗಿದ ಕುರಿತು ವ್ಯಾಪಕ ದೂರುಗಳು ಬಂದಿದ್ದವು. ದೂರುಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ ಆಯುಕ್ತರ ತಾಂತ್ರಿಕ ಜಾಗೃತಿ ಕೋಶ (ಟಿವಿಸಿಸಿ) ನಕಲಿ ಬಿಲ್ ಸೃಷ್ಟಿಸಿ ಹಣ ಪಡೆದಿರುವುದು ನಿಜವಾಗಿದ್ದು, ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕ ಕಾಯ್ದೆಗೆ ವಿರುದ್ಧವಾಗಿ ನಡೆಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಯಾರ್್ಯಾರ ವಿರುದ್ಧ ದೋಷಾರೋಪ ಪಟ್ಟಿ? ಗಾಂಧಿನಗರ: ಇದೆಯಾ ವೆಂಡನ್ (ಇ.ಇ), ಎಂ.ಎಸ್. ಪಾಲಾಕ್ಷ, ಕೆ.ಬಿ.ಜಯಣ್ಣ ಗೌಡ, ಮಲ್ಲಿಕಾರ್ಜುನ ಗೌಡ, ಎ.ರಾಧಾಕೃಷ್ಣಯ್ಯ, ಡಿ.ಎ. ಅನ್ವರ್ ಪಾಷ (ಎಲ್ಲರೂ ಎ.ಇ.ಇ), ಎಚ್.ಎನ್. ಪ್ರಭಾಕರ್, ಎಸ್. ಶಿವಮಲ್ಲು, ಎಂ.ಪ್ರಭು, ಡಿ.ಹರೀಶ್ಕುಮಾರ್, ವಿ.ಮೋಹನ್, ಆರ್.ರಮೇಶ್ (ಎಲ್ಲರೂ ಎ.ಇ), ಎಚ್. ಮಂಜುನಾಥ್, ಜೆ.ಎಚ್. ರುದ್ರಪ್ಪ, ಕೆ.ಎಸ್. ಭರತ್, ಎಂ.ನಾಗೇಶ್, ಎಂ.ಕೃಷ್ಣಮೂರ್ತಿ, ಸಿ.ಸುಬ್ರಹ್ಮಣ್ಯ, ಆರ್.ಚಂದ್ರಾನಾಯ್ಕ, ಕುಮಾರಸ್ವಾಮಿ, ಸಿ.ಕೃಷ್ಣಪ್ಪ, ಕೆ.ಜಗದೀಶ್, ಬಾಬುರಾವ್, ಟಿ.ಜಿ. ಸುರೇಶ್, ಎಂ.ಮಂಜುನಾಥ್, ಆರ್.ಬಾಲು, ಆರ್.ಚಂದ್ರಪ್ಪ (ಎಲ್ಲರೂ ಗುತ್ತಿಗೆದಾರರು) |
ಟಿವಿಸಿಸಿ ವರದಿ ಆಧರಿಸಿ 2011ರ ನವೆಂಬರ್ 4ರಂದು ಆಗಿನ ಹೆಚ್ಚುವರಿ ಆಯುಕ್ತ (ಆಡಳಿತ) ಬಿ.ಎಫ್. ಪಾಟೀಲ್ ಅವರು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಕ್ರಮದ ವಿರುದ್ಧ ಸರ್ಕಾರಕ್ಕೂ ದೂರು ಹೋದಾಗ ಬಿಎಂಟಿಎಫ್ನಿಂದ ಸಿಐಡಿಗೆ ವರ್ಗಾಯಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಂಟಿಎಫ್ನಿಂದ 153 ಹಾಗೂ ಇತರ ವಿಭಾಗಗಳಿಂದ 429 ಕಡತಗಳನ್ನು ಪಡೆದು ಸಿಐಡಿ ವಿಚಾರಣೆ ನಡೆಸಿತ್ತು. ಆದರೆ, ತನಿಖೆ ನಿಧಾನವಾಗಿದ್ದರಿಂದ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
2008–09ರ ಅವಧಿಯಲ್ಲಿ ನಡೆದ ಕಾಮಗಾರಿಗಳ ಕುರಿತು 3–4 ವರ್ಷಗಳ ಬಳಿಕ ತನಿಖೆ ನಡೆಸಿದರೆ ಆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಎದ್ದಿತ್ತು. ಬಿಬಿಎಂಪಿ ಅಧಿಕಾರಿಗಳು ತನಿಖೆಗೆ ಕಡತಗಳನ್ನು ನೀಡದೆ ಅಸಹಕಾರ ನೀಡುತ್ತಿದ್ದಾರೆ ಎನ್ನುವ ದೂರೂ ಇತ್ತು. ಪ್ರಕರಣದ ತನಿಖೆಗಾಗಿ 10,109 ಬಿಲ್ ರಿಜಿಸ್ಟರ್ (ಬಿಆರ್) ಹಾಗೂ ಅವುಗಳಿಗೆ ಸಂಬಂಧಿಸಿದ ಅಳತೆ ಪುಸ್ತಕಗಳನ್ನು (ಎಂಬಿ) ಸಿಐಡಿ ತನಿಖಾಧಿಕಾರಿಗಳಿಗೆ ಈತನಕ ಸಂಪೂರ್ಣವಾಗಿ ಪರಿಶೀಲಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಈ ಸಂಬಂಧ ಕಳೆದ ಕೌನ್ಸಿಲ್ ಸಭೆಯಲ್ಲಿ ತುರುಸಿನ ಚರ್ಚೆ ನಡೆದಿತ್ತು. ಚಾಮರಾಜಪೇಟೆ ವಾರ್ಡ್ ಸದಸ್ಯ ಬಿ.ವಿ. ಗಣೇಶ್, ‘ಹಗರಣದ ತನಿಖೆ ಎಲ್ಲಿಗೆ ಬಂದಿದೆ, ಯಾರು ತಪ್ಪಿತಸ್ಥರು ಎಂಬುದು ಸಾಬೀತಾಗಿದೆ, ಬಿಬಿಎಂಪಿಗೆ ಎಷ್ಟು ನಷ್ಟವಾಗಿದೆ ಮತ್ತು ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಶ್ನಿಸಿದ್ದರು.
ಉತ್ತರ ನೀಡಿದ್ದ ಬಿಬಿಎಂಪಿ ಅಯುಕ್ತ ಎಂ.ಲಕ್ಷ್ಮೀನಾರಾಯಣ, ‘ತನಿಖೆಯ ಸದ್ಯದ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಲು ಸಿಐಡಿಗೆ ಪತ್ರ ಬರೆಯಲಾ ಗುವುದು. ಅಲ್ಲಿಂದ ವಿವರಣೆ ಸಿಕ್ಕ ಬಳಿಕ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನಿರ್ಧರಿಸಲಾಗು ವುದು’ ಎಂದು ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.