ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಮಾಡಿದರೆ ಸಂಸ್ಥೆಯ ಒಪ್ಪಂದವನ್ನು ರದ್ದುಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ನ ವೀರಣ್ಣ ಮತ್ತಿಕಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇತ್ತೀಚೆಗೆ ಸ್ಟೆಂ ಸಂಸ್ಥೆಯ ಮೂಲಕ ಬಿಸಿಯೂಟದ ಮೌಲ್ಯಮಾಪನ ಮಾಡಿಸಲಾಗಿತ್ತು. ನಗರ ಪ್ರದೇಶದ ಸ್ವಯಂಸೇವಾ ಸಂಸ್ಥೆಗಳು ಪೂರೈ ಸುತ್ತಿರುವ ಬಿಸಿಯೂಟದಲ್ಲಿ ಕಡಿಮೆ ಪೌಷ್ಟಿಕಾಂಶ ಇದೆ ಎಂದು ವರದಿ ತಿಳಿಸಿದೆ’ ಎಂದರು.
ಸ್ವಯಂಸೇವಾ ಸಂಸ್ಥೆಗಳು ಒಂದೇ ರೀತಿಯ ತರಕಾರಿ ಬಳಸುತ್ತಿರುವುದರಿಂದ ಪೌಷ್ಟಿಕಾಂಶ ಕಡಿಮೆ ಆಗಿದೆ. ಪ್ರತಿದಿನ ನಿರ್ದಿಷ್ಟ ತರಕಾರಿಗಳನ್ನೇ ಬಳಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಈ ಬಿಸಿಯೂಟವನ್ನು ನಿರಂತರವಾಗಿ ಪರಿಶೀಲಿಸಲಾಗುವುದು ಎಂದರು.