ಬೀದರ್: ನಗರ ಬೆಳೆದಂತೆ ಸಾರಿಗೆ ಸೌಲಭ್ಯವೂ ವಿಸ್ತಾರಗೊಂಡಿದೆ. ನಗರದ ಪ್ರಯಾಣಿಕರಿಗಾಗಿಯೇ ‘ನಗರ ಸಾರಿಗೆ’ ಬಸ್ಗಳನ್ನು ಓಡಿಸಲಾಗುತ್ತಿದೆ. ಆದರೆ, ನಗರದ ವಿವಿಧೆಡೆ ಬಸ್ ತಂಗುದಾಣಗಳು ಇಲ್ಲದ ಕಾರಣ ಪ್ರಯಾಣಿಕರು ಬಿಸಿಲಿನಲ್ಲಿ ನಿಂತುಕೊಂಡೇ ಬಸ್ಗಳಿಗಾಗಿ ಕಾಯಬೇಕಾದ ಸ್ಥಿತಿ ಉಂಟಾಗಿದೆ.
ನಗರದಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್ಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇತ್ತು. ಇದೀಗ ‘ಕಲ್ಯಾಣ ಕರ್ನಾಟಕ’ ಸೇರಿದಂತೆ ಸುಮಾರು 20 ನಗರ ಸಾರಿಗೆ ಬಸ್ಗಳು ಸಂಚರಿಸುತ್ತಿವೆ. ‘ಕಲ್ಯಾಣ ಕರ್ನಾಟಕ’ ಹೆಸರಿನ 16 ನಗರ ಸಾರಿಗೆ ಬಸ್ಗಳು ಮೈಲೂರು, ಚಿಟ್ಟಾ ಕ್ರಾಸ್ (ಗುಂಪಾ), ಮಂಗಲಪೇಟ್, ಚಿದ್ರಿ, ಶಹಾಪುರಗೇಟ್್ ಮತ್ತಿತರ ಕಡೆ ಹಾಗೂ ನಾಲ್ಕು ಮಿನಿ ಬಸ್ಗಳು ನಗರದ ಹಳೆಯ ಭಾಗದಲ್ಲಿ ಓಡಾಡುತ್ತಿವೆ.
ನಗರ ಸಾರಿಗೆ ಬಸ್ಗಳು ಉತ್ತಮ ಸೇವೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದರೂ ತಂಗುದಾಣಗಳ ಕೊರತೆ ಮಾತ್ರ ಪ್ರಯಾಣಿಕರನ್ನು ಬಹುವಾಗಿ ಕಾಡುತ್ತಿದೆ. ಬಸ್ಗಳು ನಿಲ್ಲುವ ಸ್ಥಳಗಳಲ್ಲಿ ತಂಗುದಾಣಗಳು ಇಲ್ಲ. ಹೀಗಾಗಿ ಬಯಲಲ್ಲೇ ನಿಂತು ಬಸ್ಗಳಿಗೆ ಕಾಯಬೇಕಾಗಿದೆ. ತಂಗುದಾಣಗಳಿಲ್ಲದ ಕಾರಣ ಕೆಲವೊಮ್ಮೆ ಬಸ್ಗಳು ಖಚಿತವಾಗಿ ಎಲ್ಲಿ ನಿಲ್ಲುತ್ತವೆ ಎನ್ನುವುದೂ ಗೊತ್ತಾಗುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಪ್ರಯಾಣಿಕರು.
ನಗರದಲ್ಲಿ ಕೆಲಕಡೆ ಮಾತ್ರ ಬಸ್ ತಂಗುದಾಣಗಳು ಇವೆ. ಅವು ಕೂಡ ಸುಸ್ಥಿತಿಯಲ್ಲಿ ಇಲ್ಲ. ಹಾರೂಗೇರಿ ಕಮಾನ್್, ರಾಂಪುರೆ ಕಾಲೊನಿ ಮತ್ತಿತರ ಕಡೆಗಳಲ್ಲಿ ಇರುವ ಬಸ್ ತಂಗುದಾಣಗಳು ಹಾಳಾಗಿವೆ. ಹಂದಿಗಳ ತಾಣವಾಗಿ ಮಾರ್ಪಟ್ಟಿವೆ. ಹೀಗಾಗಿ ಈ ತಾಣಗಳಲ್ಲಿ ನಿಲ್ಲಲ್ಲು ಜನ ನಿರಾಕರಿಸುತ್ತಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ನಗರ ಸಾರಿಗೆ ಬಸ್ಗಳು ನಿಲ್ಲುವ ಕಡೆಗಳಲ್ಲಿ ತಂಗುದಾಣಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸುತ್ತಾರೆ ಪ್ರಯಾಣಿಕ ಆತ್ಮಾನಂದ.
ನಗರದ 25 ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕಾಗಿ ಸ್ಥಳಾವಕಾಶ ಕೋರಿ ನಗರಸಭೆಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ತಿಳಿಸುತ್ತಾರೆ ಈಶಾನ್ಯ ಕರ್ನಾಟಕ ನಗರ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ.
ಚಿಟ್ಟಾ ಕ್ರಾಸ್, ಮೈಲೂರು, ಚಿದ್ರಿ, ಶಹಾಪುರಗೇಟ್್, ನೌಬಾದ್, ಪ್ರತಾಪನಗರ, ಶಿವನಗರ ದಕ್ಷಿಣ, ಮಡಿವಾಳ ಮಾಚಿದೇವ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮಂಗಲಪೇಟ್, ಫತ್ತೇದರ್ವಾಜಾ, ಗುಂಪಾ ವರ್ತುಲ ರಸ್ತೆ, ಮೈಲೂರು ಮರ್ತುಲ ರಸ್ತೆ ಮತ್ತಿತರ ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಿಸುವ ಉದ್ದೇಶ ಇದೆ. ನಗರಸಭೆ ಸ್ಥಳ ಒದಗಿಸಿದರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಾರೆ.
ಬಸ್ ತಂಗುದಾಣಕ್ಕಾಗಿ ಸ್ಥಳ ಕೋರಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪತ್ರ ಬರೆದಿರುವುದು ನಿಜ. ನಗರಸಭೆ ಚುನಾವಣೆ ನಂತರ ಈವರೆಗೆ ಒಂದೇ ಒಂದು ಸಭೆ ನಡೆದಿಲ್ಲ. ಬರುವ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಾರೆ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೋಯಿಸ್ ಹುಸೇನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.