ಪಟ್ನಾ: ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಕಿಡಿಗೇಡಿಗಳು ಮತ್ತು ಬೀದಿಪುಂಡರ ವಿರುದ್ಧ ಧ್ವನಿ ಎತ್ತಿದ ಆಮ್ ಆದ್ಮಿ ಪಕ್ಷ (ಎಎಪಿ) ನಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಶ್ವೇತಾ ಪಾಠಕ್ ಅವರು ಎರಡು ರೀತಿಯ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ದೂರು ನೀಡಲು ಠಾಣೆಗೆ ಹೋದ 36 ವರ್ಷದ ಶ್ವೇತಾ ಅವರಿಗೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಸ್.ಎನ್. ಸಿಂಗ್ ಕಪಾಳಕ್ಕೆ ಹೊಡೆದಿದ್ದಾರೆ. ದೂರು ನೀಡಿದ್ದಕ್ಕಾಗಿ ಅವರನ್ನು ದುಷ್ಕರ್ಮಿಗಳು ಅಪಹರಿಸಿ, ಹಲ್ಲೆ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿ, ಗಾಯದ ಮೇಲೆ ಉಪ್ಪು ಸುರಿದಿದ್ದು, ಈ ಸಂದರ್ಭದಲ್ಲಿ ಸ್ಥಳಿಯರು ಅವರನ್ನು ರಕ್ಷಿಸಿದ್ದಾರೆ.
ಈ ಕುರಿತು ಎಸ್ಪಿಗೆ ದೂರು ನೀಡಲು ಹೋದಾಗ, ರಾತ್ರಿ ಪೊಲೀಸ್ ಠಾಣೆಗೆ ಹೋಗುವ ತುರ್ತು ಏನಿತ್ತು ಎಂದು ಅವರು ಪ್ರಶ್ನಿಸಿದ ಘಟನೆಯೂ ನಡೆದಿದೆ. ನಂತರ ಶ್ವೇತಾ ಅವರ ದೂರನ್ನು ಸ್ವೀಕರಿಸಿದ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಅನಾಮಿಕಾ, ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಈ ಘಟನೆಗಳಿಂದ ನೊಂದ ಶ್ವೇತಾ, ಬಿಹಾರದ ಇನ್ನೊಬ್ಬ ಎಎಪಿ ನಾಯಕಿ ಪರ್ವೀನ್ ಅಮಾನುಲ್ಲಾ (ಮಾಜಿ ಸಚಿವೆ ಮತ್ತು ಮಾಜಿ ಗೃಹ ಕಾರ್ಯದರ್ಶಿ ಪತ್ನಿ) ಅವರೊಡನೆ ಸುದ್ದಿಗೋಷ್ಠಿ ನಡೆಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯದ ನೂತನ ಡಿಜಿಪಿ ಪಿ.ಕೆ. ಠಾಕೂರ್ ಅವರನ್ನು ಒತ್ತಾಯಿಸಿದ್ದಾರೆ.