ಬೆಂಗಳೂರು: ಬೀದಿನಾಯಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ನವೀನ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ವೈದ್ಯರು ತಿಳಿಸಿದ್ದಾರೆ.
ಕೆಂಪಾಪುರ ಅಗ್ರಹಾರ ಬಳಿಯ ಹಂದಿಗೂಡು ಕೊಳೆಗೇರಿಯಲ್ಲಿ ಶುಕ್ರವಾರ ಬೀದಿನಾಯಿಯೊಂದು ನವೀನ್ನ ಮೇಲೆ ದಾಳಿ ನಡೆಸಿ ಮೂಗು ಮತ್ತು ಗಲ್ಲದ ಭಾಗಕ್ಕೆ ಕಚ್ಚಿತ್ತು.
‘ನವೀನ್ನ ಮೂಗು ಮತ್ತು ಮುಖದ ಹಲವೆಡೆ ಗಾಯದ ಗುರುತುಗಳಾಗಿವೆ. ಆತನ ಮುಖಕ್ಕೆ ಶನಿವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ಲಾಸ್ಟಿಕ್ ಸರ್ಜರಿ ಹಾಗೂ ಮಕ್ಕಳ ತಜ್ಞರ ತಂಡವು ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದೆ’ ಎಂದು ಹಿರಿಯ ವೈದ್ಯರು ಮಾಹಿತಿ ನೀಡಿದ್ದಾರೆ.
‘ಚಿಕಿತ್ಸೆ ಬಳಿಕ ಬಾಲಕನ ಪೋಷಕರು ಪರಿಹಾರ ಕೇಳಿದರೆ ಕೊಡುತ್ತೇವೆ. ಪಾಲಿಕೆಯ ವೈದ್ಯ ಡಾ.ರಾಜು ಅವರು ಕಿಮ್ಸ್ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ನವೀನ್ ಸುಮಾರು ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ಮೇಯರ್ ಶಾಂತಕುಮಾರಿ ತಿಳಿಸಿದ್ದಾರೆ.