ನವದೆಹಲಿ (ಪಿಟಿಐ): ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹ್ಮದ್ ಬುಖಾರಿ ಅವರು ತಮ್ಮ ಮಗನನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವುದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಆದರೆ ಶನಿವಾರ ನಡೆಸಲು ಉದ್ದೇಶಿಸಲಾಗಿರುವ ಉತ್ತರಾಧಿಕಾರಿ ನೇಮಕ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಉತ್ತರಾಧಿಕಾರಿ ನೇಮಕ ಸಮಾರಂಭಕ್ಕೆ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಮೌಲ್ಯ ಇಲ್ಲ. ಆದರೆ ಸಮಾರಂಭಕ್ಕೆ ತಡೆಯನ್ನೂ ನೀಡುವುದಿಲ್ಲ. ಇದು ಇಮಾಮ್ ಅವರ ಪರವಾಗಿ ನೀಡುತ್ತಿರುವ ತೀರ್ಪು ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಆರ್.ಎಸ್. ಎಂಡ್ಲಾ ಅವರಿದ್ದ ಪೀಠ ಹೇಳಿತು.
ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ, ವಕ್ಫ್ ಮಂಡಳಿ ಮತ್ತು ಬುಖಾರಿ ಅವರ ಪ್ರತಿಕ್ರಿಯೆಯನ್ನು ಕೋರ್ಟ್ ಕೇಳಿತ್ತು.
ಬುಖಾರಿ ಅವರು ತಮ್ಮ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸುವುದಕ್ಕೆ ಕಾನೂನಿನಲ್ಲಿ ಯಾವುದೇ ಮೌಲ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ವಕ್ಫ್ ಮಂಡಳಿ ಹೇಳಿತ್ತು.
ವಕ್ಫ್ ಮಂಡಳಿಯ ಆಸ್ತಿಯಾಗಿರುವ ಜಾಮಾ ಮಸೀದಿಯ ಉಸ್ತುವಾರಿಯಲ್ಲಿ ಮಂಡಳಿ ಯಾವುದೇ ಅಧಿಕಾರ ಚಲಾಯಿಸದಿರಲು ಕಾರಣವೇನು ಎಂಬ ಪ್ರಶ್ನೆಗೆ ಮಂಡಳಿ ಉತ್ತರಿಸಿಲ್ಲ. ಹಾಗೆಯೇ ಜಾಮಾ ಮಸೀದಿಯ ಎಲ್ಲ ವರಮಾನವನ್ನೂ ಬುಖಾರಿ ಅವರೇ ಅನುಭವಿಸುತ್ತಿದ್ದಾರೆ. ನ್ಯಾಯಾಲಯದ ನಿರ್ದೇಶನವಿದ್ದರೂ ಲೆಕ್ಕಪತ್ರ ಪರಿಶೀಲನೆಯ ಕೆಲಸವನ್ನೂ ವಕ್ಫ್ ಮಂಡಳಿ ಮಾಡಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸುಹೈಲ್ ಅಹ್ಮದ್ ಖಾನ್, ಅಜಯ್ ಗೌತಮ್ ಮತ್ತು ವಿ.ಕೆ. ಆನಂದ್ ಎಂಬವರು ಬುಖಾರಿ ಅವರು ತಮ್ಮ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸಲು ಹೊರಟಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.