ಬೆಂಗಳೂರು: ಸತತ ಅನಾರೋಗ್ಯ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಕೃತಿ ಚಿಕಿತ್ಸೆಗಾಗಿ ಗುರುವಾರ ಬೆಂಗಳೂರಿಗೆ ಬಂದಿದ್ದಾರೆ.
ನಿರಂತರ ಕೆಮ್ಮು ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಕೇಜ್ರಿವಾಲ್, 10 ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ.
ಪೋಷಕರ ಜತೆಗೆ ಮಧ್ಯಾಹ್ನ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇಜ್ರಿವಾಲ್, ನೇರವಾಗಿ ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾ ಸಂಸ್ಥೆಗೆ ತೆರಳಿದರು.
‘ಕೇಜ್ರಿವಾಲ್ ಅವರಿಗೆ ಕೆಮ್ಮಿಗಾಗಿ ನಿರ್ವಿಷೀಕರಣ ಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ನೀಡಲಾಗುವುದು’ ಎಂದು ಜಿಂದಾಲ್ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ. ಬಬಿನಾ ನಂದಕುಮಾರ್ ತಿಳಿಸಿದ್ದಾರೆ.
ಈ ಮೊದಲು 2012ರಲ್ಲಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ರಕ್ತದೊತ್ತಡಕ್ಕಾಗಿ ಇಲ್ಲಿ ಚಿಕಿತ್ಸೆ ಪಡೆದಿದ್ದರು. ಅವರೊಂದಿಗೆ ಕೇಜ್ರಿವಾಲ್ ಅವರು ಸಕ್ಕರೆ ಕಾಯಿಲೆಗಾಗಿ ಇಲ್ಲಿ 10 ದಿನಗಳ ಚಿಕಿತ್ಸೆ ಪಡೆದಿದ್ದರು.