ಜೈಪುರ (ಪಿಟಿಐ): ನರ್ಸ್ ಒಬ್ಬರ ವರ್ಗಾವಣೆಗೆ ಸಂಬಂಧಿಸಿದಂತೆ ಕೋಟಾ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆರ್.ಎನ್. ಯಾದವ್ ಅವರಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಬಿಜೆಪಿ ಶಾಸಕ ಪ್ರಹ್ಲಾದ್ ಗುಂಜಲ್ ಅವರನ್ನು ಪಕ್ಷ ಅಮಾನತುಗೊಳಿಸಿದೆ.
ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರ ನಿರ್ದೇಶನದಂತೆ ಕೋಟಾ (ಉತ್ತರ) ಶಾಸಕ ಗುಂಜಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಭಾವೋದ್ವೇಗಕ್ಕೆ ಒಳಗಾಗಿ ಬಳಸಬಾರದ ಶಬ್ದಗಳನ್ನು ಬಳಸಿದ್ದೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಗುಂಜಲ್ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಶೋಕ ಪರ್ಣಮಿ ಮತ್ತು ಮುಖ್ಯಮಂತ್ರಿ ವಸುಂಧರಾರಾಜೆ ಅವರಿಗೆ ಬರೆದಿರುವ ಕ್ಷಮಾಪಣೆ ಪತ್ರದಲ್ಲಿ ತಿಳಿಸಿದ್ದಾರೆ.
ನನಗೆ ಒತ್ತಡದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಈ ಮಧ್ಯೆ ಆರೋಗ್ಯಾಧಿಕಾರಿ ಯಾದವ್ ಅವರು ಸ್ವಯಂ ನಿವೃತ್ತಿ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಆರೋಗ್ಯಾಧಿಕಾರಿಗೆ ಬೆದರಿಕೆಯೊಡ್ಡಿದ ಸಂಭಾಷಣೆಯ ಆಡಿಯೋ ವಾಟ್ಸ್ಆ್ಯಪ್ನಲ್ಲಿ ಹರಿದಾಡಿ ವಿವಾದಕ್ಕೆ ಕಾರಣವಾಯಿತು.