ಬೆಂಗಳೂರು: ವರ್ತೂರು ಮುಖ್ಯರಸ್ತೆಯ ಕುಂದಲಹಳ್ಳಿ ಜಂಕ್ಷನ್ ಬಳಿ ಮಂಗಳವಾರ ಮಧ್ಯಾಹ್ನ ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಹೇಮಂತ್ ಪದ್ಮನಾಭ (30) ಎಂಬ ವಕೀಲರು ಸಾವನ್ನಪ್ಪಿದ್ದಾರೆ.
ಮೂಲತಃ ಶಿವಮೊಗ್ಗದ ಹೇಮಂತ್ ಅವರು ಕುಟುಂಬ ಸದಸ್ಯರೊಂದಿಗೆ ತುಮಕೂರಿನಲ್ಲಿ ನೆಲೆಸಿದ್ದರು.
ನಗರದ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಅವರು ಪ್ರತಿನಿತ್ಯ ರೈಲಿನಲ್ಲಿ ತುಮಕೂರಿನಿಂದ ನಗರಕ್ಕೆ ಬಂದು ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೈಯಕ್ತಿಕ ಕೆಲಸದ ನಿಮಿತ್ತ ಸ್ನೇಹಿತನ ಬೈಕ್ನಲ್ಲಿ ವರ್ತೂರಿಗೆ ಬಂದಿದ್ದ ಅವರು ವಾಪಸ್ ಹೋಗುತ್ತಿದ್ದಾಗ ಮತ್ತೊಂದು ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಂತರ ಬೈಕ್ ಸವಾರ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ವೈಟ್ಫೀಲ್ಡ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.