ಬೆಂಗಳೂರು: ‘ಬೋಧಗಯಾ ಮತ್ತು ನಾಗಪುರದ ದೀಕ್ಷಾ ಭೂಮಿಗೆ ಯಾತ್ರೆ ಕೈಗೊಳ್ಳುವ ಅಂಬೇಡ್ಕರ್ ಅನುಯಾಯಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ರಾಜ್ಯ ಸರ್ಕಾರದ ವತಿಯಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.
ನಗರದ ದಂಡು ಪ್ರದೇಶದ ರೈಲು ನಿಲ್ದಾಣದಿಂದ ಬುಧವಾರ ನಾಗಪುರದ ದೀಕ್ಷಾಭೂಮಿಗೆ ತೆರಳಿದ ಯಾತ್ರಾರ್ಥಿಗಳಿಗೆ ಬೀಳ್ಕೊಟ್ಟ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಹಜ್ ಯಾತ್ರಿಗಳಿಗೆ ನೀಡುವ ಸೌಲಭ್ಯದ ಮಾದರಿಯಲ್ಲಿ ಬೌದ್ಧ ಅನುಯಾಯಿ ಅಲ್ಪಸಂಖ್ಯಾತರು ಕೈಗೊಳ್ಳುವ ಯಾತ್ರೆಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮುಂದಿನ ವರ್ಷದಿಂದ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಯಾತ್ರಿಗಳನ್ನು ಅರ್ಜಿ ಆಹ್ವಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಯಾಣ ಉಚಿತವಾಗಿರುತ್ತದೆ’ ಎಂದು ತಿಳಿಸಿದರು.
ದಂಡುಪ್ರದೇಶದಿಂದ ಬುಧವಾರ ವಿಶೇಷ ರೈಲಿನಲ್ಲಿ ಸಾವಿರಕ್ಕೂ ಅಧಿಕ ಅಂಬೇಡ್ಕರ್ ಅನುಯಾಯಿಗಳು ನಾಗಪುರದ ದೀಕ್ಷಾಭೂಮಿಗೆ ತೆರಳಿದರು.