ನವದೆಹಲಿ (ಐಎಎನ್ಎಸ್): ಬೋಧನೆ ‘ಜೀವನ ಧರ್ಮವೇ’ ಹೊರತು ವೃತ್ತಿ ಅಥವಾ ಉದ್ಯೋಗ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ. ತಮ್ಮ ನಿವಾಸದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ 350 ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಶಿಕ್ಷಕರಾದವರು ಯಾವತ್ತೂ ನಿವೃತ್ತಿ ಹೊಂದುವುದಿಲ್ಲ. ಹೊಸ ತಲೆಮಾರಿಗೆ ಶಿಕ್ಷಣ ನೀಡಲು ಅವರು ಸಕ್ರಿಯರಾಗಿರುತ್ತಾರೆ’ ಎಂದರು.
‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಾಲೆಯಲ್ಲಿದ್ದ ನನ್ನ ಸಹಪಾಠಿಗಳನ್ನು ಮತ್ತು ಶಿಕ್ಷಕರನ್ನು ನನ್ನ ಮನೆಗೆ ಕರೆದು ಸನ್ಮಾನಿಸಿದ್ದೆ. ಇದು ನನ್ನ ಇಚ್ಛೆ ಆಗಿತ್ತು’ ಎಂದು ನುಡಿದರು.
‘ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರು ಸ್ಪಷ್ಟವಾದ ಮುನ್ನೋಟ ಹೊಂದಿರಬೇಕು’ ಎಂದೂ ಪ್ರಧಾನಿ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿಯೊಂದಿಗೆ ಸಂವಾದ ನಡೆಸಿದ ಶಿಕ್ಷಕರು ಕಲಿಕೆಯ ಹಲವಾರು ಮಜಲುಗಳ ಬಗ್ಗೆ ಮಾತನಾಡಿದರು.