ಟೇಕಲ್ (ಮಾಲೂರು ತಾಲ್ಲೂಕು): ಹೋಬಳಿಯ ಉಳ್ಳೇರಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 2 ವರ್ಷದ ಹೆಣ್ಣು ಚಿರತೆ ಸೆರೆಗೆ ಸಿಕ್ಕಿದೆ.
ಬೆಟ್ಟ ಮತ್ತು ಅರಣ್ಯ ಸುತ್ತಮುತ್ತಲಿನ ಗ್ರಾಮಗಳಾದ ಉಳ್ಳೇರಹಳ್ಳಿ, ಹುಣಸೀಕೋಟೆ, ಬಲ್ಲೇರಿ ಸುತ್ತಮುತ್ತಲಿನ ಬೆಟ್ಟದಲ್ಲಿ ಇರುವ ಚಿರತೆಗಳು ಪದೆ ಪದೇ ಗ್ರಾಮಗಳಿಗೆ ನುಗ್ಗುತ್ತಿದ್ದವು. ಕುರಿ, ಮೇಕೆ, ಸಣ್ಣ ಪುಟ್ಟ ಜಾನುವಾರುಗಳನ್ನು ತಿಂದಿದ್ದವು.
ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಈ ಬೋನಿಗೆ 2 ವರ್ಷದ ಹೆಣ್ಣು ಚಿರತೆಯೊಂದು ಬಿದ್ದಿದೆ. ಚಿರತೆಯನ್ನು ಬನ್ನೇರುಗಟ್ಟ ಅರಣ್ಯಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.