ಮೈಸೂರು: ಇಲ್ಲಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರ ನಿವಾಸಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಧಾರವಾಡದಲ್ಲಿ ನಡೆದ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆಯಿಂದ ಜಾಗೃತರಾದ ಪೊಲೀಸರು ಭಗವಾನ್ ಅವರ ನಿವಾಸಕ್ಕೆ ನೀಡಿದ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
ಮಾನಸಂಗೋತ್ರಿಯಲ್ಲಿ ಫೆಬ್ರುವರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಗವದ್ಗೀತೆಯ ಕುರಿತು ನೀಡಿದ ಹೇಳಿಕೆಯ ಪರಿಣಾಮವಾಗಿ ಪ್ರೊ.ಭಗವಾನ್ ಅವರ ವಿರುದ್ಧವೂ ಪ್ರತಿಭಟನೆಗಳು ನಡೆದಿದ್ದವು. ಹಿಂದೂಪರ ಸಂಘಟನೆಗಳು ಮನೆಗೆ ಮುತ್ತಿಗೆ ಹಾಕಿದ್ದರು. ಹೀಗಾಗಿ, ಅವರ ಮನೆಗೆ ನಗರ ಸಶಸ್ತ್ರ ಪೊಲೀಸ್ (ಸಿಎಆರ್) ಪಡೆಯ 10 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದಿನದ 24 ಗಂಟೆಯೂ ಭದ್ರತೆ ಕಲ್ಪಿಸಲಾಗಿತ್ತು.
*
ಭಗವದ್ಗೀತೆಯ ಕುರಿತು ವಿವಾದವಾದ ಬಳಿಕ ಪೊಲೀಸರು ಮನೆಗೆ ಭದ್ರತೆ ಒದಗಿಸಿದ್ದಾರೆ. ಇದು ನಾನಾಗಿ ಅಪೇಕ್ಷೆಪಟ್ಟು ಪಡೆದಿಲ್ಲ. ಅದರ ಅಗತ್ಯವನ್ನು ಮನಗಂಡು ಸರ್ಕಾರ ನೀಡಿದೆ.
-ಪ್ರೊ.ಕೆ.ಎಸ್. ಭಗವಾನ್,
ವಿಚಾರವಾದಿ