ಶ್ರೀನಗರ (ಪಿಟಿಐ): ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾಪಡೆಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್ ಎ ತಯ್ಯಬಾದ (ಎಲ್ಇಟಿ) ಪಾಕಿಸ್ತಾನಿ ಕಮಾಂಡರ್ ಮೆಹಮೂದ್ ಭಾಯ್ ಮೃತಪಟ್ಟಿದ್ದಾಗಿ ಸೇನಾ ವಕ್ತಾರರು ತಿಳಿಸಿದ್ದಾರೆ.
ಸೊಪೋರ್ನ ತರ್ಜೂ ಗ್ರಾಮದಲ್ಲಿ ಭಾನುವಾರ ಸಂಜೆ ಉಗ್ರರು ಭದ್ರತಾ ಪಡೆಯತ್ತ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಸಿಬ್ಬಂದಿ ಕೂಡ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.
‘ಉಗ್ರರು ತಪ್ಪಿಸಿಕೊಳ್ಳದಂತೆ ಈ ಪ್ರದೇಶದಲ್ಲಿ ಬಿಗಿ ಕಾವಲು ಹಾಕಲಾಗಿತ್ತು. ಸೋಮವಾರ ಮಧ್ಯಾಹ್ನ ಸುಮಾರು ಎರಡು ಗಂಟೆ ಹೊತ್ತಿಗೆ ಮೆಹಮೂದ್ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ಆಗ ಗುಂಡಿನ ದಾಳಿಗೆ ಮೃತಪಟ್ಟ’ ಎಂದು ವಕ್ತಾರರು ಹೇಳಿದ್ದಾರೆ.
ಸ್ಥಳದಲ್ಲಿ ಇಬ್ಬರು ಉಗ್ರರು ಇದ್ದರು ಎನ್ನಲಾಗಿತ್ತು. ಆದರೆ ಒಬ್ಬನ ಮೃತದೇಹ ಮಾತ್ರ ಪತ್ತೆಯಾಗಿದೆ. ಇನ್ನೊಬ್ಬ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದಲ್ಲಿ ಕಳೆದ ವಾರ ನಡೆದ ಎರಡು ಯಶಸ್ವಿ ಕಾರ್ಯಾಚರಣೆಗಳ ಬೆನ್ನಲ್ಲಿಯೇ ಮೆಹಮೂದ್ ಹತ್ಯೆಯಾಗಿದ್ದಾನೆ.