ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯಕ್ಕೆ ಸೆಡ್ಡು ಹೊಡೆಯೋಣ

ಪ್ಯಾರಿಸ್ ದಾಳಿ ಜನರಲ್ಲಿ ಭೀತಿ ಹುಟ್ಟು ಹಾಕಲು ನಡೆಸಿದ ಸಂಘಟಿತ ಪ್ರಯತ್ನ
Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಲಕ್ಷಾಂತರ ಜನರಂತೆ ನಾನೂ ಪ್ಯಾರಿಸ್‌ನ ಸುದ್ದಿಯನ್ನೇ ಬೆನ್ನು ಹತ್ತಿ ಗಮನಿಸುತ್ತಿದ್ದೆ. ಭೀತಿಯಿಂದ ಹೀಗೆ ಗಮನಿಸುವ ಆತುರದಲ್ಲಿ ಉಳಿದೆಲ್ಲ ಕೆಲಸಗಳನ್ನು ಬದಿಗಿರಿಸಿದ್ದೆ. ಇದು ಮನುಷ್ಯನ ಸ್ವಾಭಾವಿಕ ಪ್ರತಿಕ್ರಿಯೆ. ಆದರೆ ಇದು ಭಯೋತ್ಪಾದಕರು ಬಯಸಿದ ಪ್ರತಿಕ್ರಿಯೆಯೂ ಹೌದು. ಆದರೆ ಈ ವಿಚಾರವನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ ಎನ್ನಲಾಗದು.

ಉದಾಹರಣೆಗೆ ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜೆಬ್‌ ಬುಷ್ ಪ್ರತಿಕ್ರಿಯೆ ಗಮನಿಸಿ. ‘ಇದು ಪಾಶ್ಚಿಮಾತ್ಯ ನಾಗರಿಕತೆಯನ್ನು ಹಾಳು ಮಾಡಲು ಭಯೋತ್ಪಾದಕರು ನಡೆಸಿದ ಸಂಘಟಿತ ಯತ್ನ’ ಎಂದು ಅವರು ಹೇಳಿದರು. ವಾಸ್ತವವಾಗಿ ಅಂಥದ್ದೇನೂ ನಡೆದಿಲ್ಲ. ಪ್ಯಾರಿಸ್ ದಾಳಿ ಜನರಲ್ಲಿ ಭೀತಿ ಹುಟ್ಟು ಹಾಕಲು ನಡೆಸಿದ ಸಂಘಟಿತ ಪ್ರಯತ್ನ. ಆದರೆ ಜೆಬ್‌ ಬುಷ್‌ರಂಥವರು ನೀಡುವ ಹೇಳಿಕೆಗಳು ವಾಸ್ತವವನ್ನು ಅಸ್ಪಷ್ಟವಾಗಿಸುತ್ತವೆ. ಭಯೋತ್ಪಾದಕರ ಶಕ್ತಿಯನ್ನು ಇರುವುದಕ್ಕಿಂತಲೂ ಹೆಚ್ಚಾಗಿ ಬಿಂಬಿಸುತ್ತವೆ ಜೊತೆಗೆ ಜಿಹಾದಿಗಳ ಪ್ರಯತ್ನಕ್ಕೆ ಬಲ ತುಂಬುತ್ತವೆ.

ಫ್ರಾನ್ಸ್‌ನಲ್ಲಿ ಪ್ರಜಾಪ್ರಭುತ್ವ ಸದೃಢವಾಗಿ ಬೇರೂರಿದೆ. ಅಮೆರಿಕಕ್ಕೆ ಹೋಲಿಸಿದರೆ ಫ್ರಾನ್ಸ್‌ನ ರಕ್ಷಣಾ ಬಜೆಟ್ ಚಿಕ್ಕದು. ಆದರೆ ಅದರ ಮಿಲಿಟರಿ ಶಕ್ತಿ ದೊಡ್ಡದು. ಅಗತ್ಯಬಿದ್ದರೆ ಮಿಲಿಟರಿಯನ್ನು ಕ್ಷಿಪ್ರವಾಗಿ ಬಲಪಡಿಸುವ ಸಂಪನ್ಮೂಲ ಫ್ರಾನ್ಸ್‌ನಲ್ಲಿದೆ. ಸಿರಿಯಾಗೆ ಹೋಲಿಸಿದರೆ ಫ್ರಾನ್ಸ್‌ನ ಆರ್ಥಿಕತೆ 20 ಪಟ್ಟು ದೊಡ್ಡದು.

ಐಎಸ್‌ ಉಗ್ರರು ಫ್ರಾನ್ಸ್‌ ಅನ್ನು ಆಕ್ರಮಿಸಲು, ಪಾಶ್ಚಿಮಾತ್ಯ ನಾಗರಿಕತೆ ನಾಶಪಡಿಸಲು ಸಾಧ್ಯವಿಲ್ಲ. ಅಂಥ ಸಾಧ್ಯತೆಯೂ ಕಾಣಿಸುತ್ತಿಲ್ಲ. ಹಾಗಿದ್ದರೆ ನವೆಂಬರ್‌ 13ರ ದಾಳಿ ಏನನ್ನು ಸೂಚಿಸುತ್ತದೆ? ಸಂಗೀತ ಕಛೇರಿ ಮತ್ತು ರೆಸ್ಟೊರೆಂಟ್‌ಗಳಲ್ಲಿದ್ದ ಜನರನ್ನು ಬೇಕಾಬಿಟ್ಟಿಯಾಗಿ ಗುಂಡು ಹಾರಿಸಿ ಕೊಲ್ಲುವುದು ದುಷ್ಕರ್ಮಿಗಳ ಮೂಲಭೂತ ದೌರ್ಬಲ್ಯವನ್ನು ಬಿಂಬಿಸಿತು. ಪ್ಯಾರಿಸ್‌ನಲ್ಲಿ ಖಿಲಾಫತ್ ಸ್ಥಾಪಿಸಲು ಸಾಧ್ಯವಿಲ್ಲ. ಆದರೆ, ಜನರ ಮನದಲ್ಲಿ ಭೀತಿ ಹುಟ್ಟಿಸಲು ಸಾಧ್ಯವಿದೆ. ಭಯ ಬಿತ್ತುವವರೇ ಭಯೋತ್ಪಾದಕರಲ್ಲವೇ? ಭಯೋತ್ಪಾದನಾ ಕೃತ್ಯವನ್ನು ಯುದ್ಧದೊಂದಿಗೆ ಹೋಲಿಸಿದರೆ, ದೊಡ್ಡ ಗೌರವ ಕೊಟ್ಟಂತಾಗುತ್ತದೆ.

ಭಯೋತ್ಪಾದನಾ ಕೃತ್ಯದ ಪರಿಣಾಮವನ್ನು ಕಡಿಮೆ ಅಂದಾಜು ಮಾಡಬೇಕು ಎನ್ನುವುದು ನನ್ನ ವಾದವಲ್ಲ. ಭಯೋತ್ಪಾದಕರ ನೇರ ದಾಳಿಗಿಂತಲೂ, ಅದರ ನಂತರದ ಪ್ರತಿಕ್ರಿಯೆಗಳು ನಮ್ಮ ಸಮಾಜದ ಮೇಲೆ ಉಂಟು ಮಾಡುವ ಪರಿಣಾಮಗಳು ಹೆಚ್ಚು ಅಪಾಯಕಾರಿ. ನಮ್ಮ ಆತುರದ ತರ್ಕದಲ್ಲಿ ನೀಡುವ ಪ್ರತಿಕ್ರಿಯೆ ತಪ್ಪಾಗಬಹುದಾದ ಹಲವು ಸಾಧ್ಯತೆಗಳಿವೆ ಎಂಬ ಸಂಗತಿಯನ್ನು ಇಲ್ಲಿ ಅತಿಮುಖ್ಯವಾಗಿ ಗಮನಿಸಬೇಕು.

ಭಯೋತ್ಪಾದಕರ ಮನವೊಲಿಕೆಗೆ ಫ್ರಾನ್ಸ್‌ ಅಥವಾ ಯಾವುದೇ ದೇಶ ಯತ್ನಿಸುವುದನ್ನು ಅತ್ಯಂತ ಕೆಟ್ಟ ಬೆಳವಣಿಗೆ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಉದಾಹರಣೆಗೆ ಜಿಹಾದಿಗಳು ತನ್ನ ತಂಟೆಗೆ ಬರದಿರಲಿ ಎಂಬ ಕ್ಷೀಣ ಆಸೆಯಲ್ಲಿ ಐಎಸ್‌ ಅನ್ನು ಮಟ್ಟಹಾಕಲು ನಡೆಯುತ್ತಿರುವ ಅಂತರರಾಷ್ಟ್ರೀಯ ಪ್ರಯತ್ನದಿಂದ ಫ್ರಾನ್ಸ್‌ ಹಿಂದೆ ಸರಿಯಬೇಕು ಎಂಬ ವಾದ ಗಮನಿಸಿ. ಭವಿಷ್ಯದಲ್ಲಿ ಅಲ್ಲಿ ಶಾಂತಿ ಬಯಸುವವರು ಹುಟ್ಟಿಕೊಳ್ಳುವುದಿಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ಕೆಲವರು ಪಾಶ್ಚಿಮಾತ್ಯ ನಿರಂಕುಶ, ಸಾಮ್ರಾಜ್ಯಶಾಹಿ ಮನೋಭಾವವೇ ಎಲ್ಲ ಕೆಡುಕಿಗೂ ಮೂಲ ಕಾರಣ ಎನ್ನುತ್ತಾರೆ. ಇತರ ದೇಶಗಳ ವಿದ್ಯಮಾನದಲ್ಲಿ ಪಾಶ್ಚಾತ್ಯ ದೇಶಗಳು ಮೂಗು ತೂರಿಸುವುದನ್ನು ನಿಲ್ಲಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ವಾದಿಸುತ್ತಾರೆ. ಆದರೆ ವಾಸ್ತವ ಜಗತ್ತಿನ ಉದಾಹರಣೆಗಳು ಬೇರೆ ಕಥೆ ಹೇಳುತ್ತವೆ.

ಮುಖ್ಯವಾಹಿನಿಯ ರಾಜಕಾರಣಿಗಳು, ಸರ್ಕಾರಗಳು ಭಯೋತ್ಪಾದಕರಿಗೆ ಬಾಗಿದ ಉದಾಹರಣೆಗಳು ಅತಿ ಕಡಿಮೆ. ಅಮೆರಿಕದಲ್ಲಿ ಲಿಬರಲ್ ಪಕ್ಷದ ರಾಜಕಾರಣಿಗಳು ಭಯೋತ್ಪಾದಕರಿಗೆ ಬಾಗಿದ್ದಾರೆ ಎಂದು ಜನ ಆರೋಪಿಸುತ್ತಾರೆ. ಇದಕ್ಕಿಂತಲೂ ದೊಡ್ಡ ಅಪಾಯವೊಂದಿದೆ. ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ನಡೆಸುವ ಹೋರಾಟದಲ್ಲಿ, ಜನರಿಗೆ– ದೇಶಕ್ಕೆ ಪರಿಪೂರ್ಣ ಭದ್ರತೆ ಒದಗಿಸಲು ಸರ್ಕಾರಗಳು ಹೆಣಗುತ್ತವೆ. ಈ ಪ್ರಯತ್ನದಲ್ಲಿ ದಾಳಿಗೆ ಗುರಿಯಾಗಬಹುದಾದ ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಭದ್ರತಾ ಕಾರ್ಯಾಚರಣೆ ನಡೆಯುತ್ತದೆ. ಇಂಥ ಪ್ರತಿಕ್ರಿಯೆಯು ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಹಾಳುಮಾಡುತ್ತದೆ. ಏಕೆಂದರೆ ಜಗತ್ತು ಬಲು ದೊಡ್ಡದು ಮತ್ತು ಬಹು ಸಂಕೀರ್ಣವಾದುದು.

ಸೂಪರ್‌ ಪವರ್ ಎನಿಸಿಕೊಂಡ ದೇಶಗಳು ಮನಸ್ಸು ಮಾಡಿದರೂ ಎಲ್ಲವನ್ನೂ ಸರಿಪಡಿಸಲು ಆಗುವುದಿಲ್ಲ. 2001, ಸೆಪ್ಟೆಂಬರ್ 11ರ (9/11) ದಾಳಿಯ ನಂತರ ಅಮೆರಿಕದ ಅಂದಿನ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್‌ ತನ್ನ ಅಧಿಕಾರಿಗಳಿಗೆ ಹೀಗೆ ಹೇಳಿದರು. ‘ಸಂಬಂಧಿಸಿದೆಯೋ ಇಲ್ಲವೋ, ಗುಡಿಸಿಹಾಕಿ’. ಅವಳಿ ಗೋಪುರದ ದಾಳಿಯನ್ನು ಇರಾಕ್ ಅತಿಕ್ರಮಣಕ್ಕೆ ವಿನಾಯಿತಿಯಾಗಿ ಬಳಸಿಕೊಳ್ಳಲು ಸೂಚಿಸಿದರು. ಅದರ ಪರಿಣಾಮ ಭೀಕರ ಯುದ್ಧ ನಡೆಯಿತು. ಅದು ಭಯೋತ್ಪಾದಕರಿಗೆ ಬಲ ಕೊಟ್ಟಿತು. ಐಎಸ್‌ ಉದ್ಭವಿಸಲು ಪೂರಕ ವಾತಾವರಣ ಕಲ್ಪಿಸಿಕೊಟ್ಟಿತು.

ಭಯೋತ್ಪಾದನೆಯನ್ನು ಜನ ರಾಜಕೀಯ ಲಾಭಕ್ಕಾಗಿಯೂ ಬಳಸಿಕೊಳ್ಳುತ್ತಾರೆ. ಜಗತ್ತು ಭಯೋತ್ಪಾದನೆಯೊಂದಿಗೆ ಇತರ ಅನೇಕ ಸಮಸ್ಯೆಗಳನ್ನೂ ಎದುರಿಸುತ್ತಿದೆ. ಇತರ ವಿಚಾರಗಳಿಂದ ನಮ್ಮ ದೃಷ್ಟಿಯನ್ನು ಬದಲಿಸಲು ಭಯೋತ್ಪಾದನೆ  ಅವಕಾಶ ಮಾಡಿಕೊಡಬಾರದು. ಬರಾಕ್‌ ಒಬಾಮ ಹವಾಮಾನ ಬದಲಾವಣೆಯನ್ನು ಜಗತ್ತಿನ ಅತಿ ದೊಡ್ಡ ಅಪಾಯ ಎಂದು ವ್ಯಾಖ್ಯಾನಿಸಿದರು. ಅವರ ಮಾತನ್ನು ನಾನೂ ಒಪ್ಪುತ್ತೇನೆ. ಅಮೆರಿಕನ್ ನಾಗರಿಕತೆಯನ್ನು ಭಯೋತ್ಪಾದನೆ ಅಳಿಸಿ ಹಾಕುವುದಿಲ್ಲ. ಆದರೆ ಜಾಗತಿಕ ಉಷ್ಣಾಂಶ ಏರಿಕೆ ಆ ಕೆಲಸ ಮಾಡಬಲ್ಲದು.

ಪ್ಯಾರಿಸ್‌ ದಾಳಿಗೂ ಮೊದಲು ಭಯೋತ್ಪಾದನೆಗೆ ಪಾಶ್ಚಾತ್ಯ ದೇಶಗಳ ಸಾಮಾನ್ಯ ಪ್ರತಿಕ್ರಿಯೆಯು ಆಂತರಿಕ ಭದ್ರತೆ ಮಾತ್ರವೇ ಆಗಿತ್ತು. ಇದು ಪೊಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಒಳಗೊಂಡಿರುತ್ತಿತ್ತು.  ಇಂಥ ಕಾರ್ಯಾಚರಣೆಗಳು ಅತ್ಯಂತ ಕ್ಲಿಷ್ಟಕರ. ಒಂದನ್ನು ಸಾಧಿಸಲು ಮತ್ತೊಂದನ್ನು ಕಳೆದುಕೊಳ್ಳಬೇಕಾದ ಅನಿವಾರ್ಯವನ್ನು ಅವು ಹೊಂದಿದ್ದವು. ಒಂದು ಪರಿಹಾರದೊಂದಿಗೆ ಮತ್ತೊಂದು ಸಮಸ್ಯೆ ತಳಕು ಹಾಕಿಕೊಂಡಿರುತ್ತಿತ್ತು. ಇದೆಲ್ಲದರ ಜೊತೆಗೆ ಭಯೋತ್ಪಾದನಾ ದಾಳಿ ಅಪಾಯವಂತೂ ಇದ್ದೇ ಇರುತ್ತದೆ.

ಪ್ಯಾರಿಸ್‌ ದಾಳಿ ಈ ಲೆಕ್ಕಾಚಾರಗಳನ್ನು ಕೊಂಚ ಬದಲಿಸಿದೆ. ಯುರೋಪ್‌ನತ್ತ ಬರುತ್ತಿರುವ ನಿರಾಶ್ರಿತರ ನಿರ್ವಹಣೆ ಮತ್ತಷ್ಟು ಜಟಿಲಗೊಂಡಿದೆ. ಅಷ್ಟು ದೊಡ್ಡ ಅಪರಾಧದ ಸಂಚನ್ನು ಮೊದಲೇ ಭೇದಿಸಲು– ವಿಫಲಗೊಳಿಸಲು ಏಕೆ ಸಾಧ್ಯವಾಗಲಿಲ್ಲ ಎಂಬುದರ ಆಮೂಲಾಗ್ರ ಪರಿಶೀಲನೆಯೂ ನಡೆಯಬೇಕಿದೆ. ಭಯೋತ್ಪಾದಕರ ಉದ್ದೇಶ ಭಯವನ್ನು ಹುಟ್ಟು ಹಾಕುವುದು. ಅವರಿಂದ ಅದಷ್ಟನ್ನೇ ಮಾಡಲು ಸಾಧ್ಯ. ನಾವೂ ಮತ್ತು ನಮ್ಮ ಸಮಾಜ ಭಯಕ್ಕೆ ಸೆಡ್ಡು ಹೊಡೆಯುವ ಮೂಲಕ ಇದಕ್ಕೆ ಪ್ರತಿಕ್ರಿಯಿಸಬೇಕು.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT