ಬೆಂಗಳೂರು: ‘ಭಾರತದ ಬಗ್ಗೆ ನನ್ನಲ್ಲಿ ಹಲವು ತಪ್ಪು ಕಲ್ಪನೆಗಳಿದ್ದವು. ಭಾರತವೆಂದರೆ ಹಾವಾಡಿಗರ ದೇಶ, ರಸ್ತೆಗಳಲ್ಲಿಯೇ ಹಾವುಗಳಿರುತ್ತವೆ, ಭಿಕ್ಷುಕರ ಸಂಖ್ಯೆ ಹೆಚ್ಚಿರುತ್ತದೆ ಎಂದೆಲ್ಲಾ ತಿಳಿದುಕೊಂಡಿದ್ದೆ. ಆದರೆ, ನನ್ನ ಆ ಕಲ್ಪನೆ ತಪ್ಪು ಎಂದು ಅರಿವಾಗಲು ಹೆಚ್ಚು ದಿನಬೇಕಾಗಲಿಲ್ಲ’ ಎಂದು ಅಮೆರಿಕದ ವಾಯುಪಡೆಯ ಕರ್ನಲ್ (ನಿವೃತ್ತ) ಜೆರ್ರಿ ಮಿಲ್ಲರ್ ಹೇಳಿದರು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಹಾಗೂ ಬೆಂಗಳೂರು ವಿಜ್ಞಾನ ವೇದಿಕೆಯು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ವಿಶ್ವದಲ್ಲಿಯೇ ಅಗಾಧ ಪ್ರಗತಿ ಸಾಧಿಸಿ ನಿಬ್ಬೆರಗಾಗಿಸಿದೆ. ವಿಜ್ಞಾನ ಹಾಗೂ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಸಂಸ್ಕೃತಿ ಶ್ರೇಷ್ಠವಾಗಿದೆ’ ಎಂದು ಬಣ್ಣಿಸಿದರು.
‘ಭಾರತಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಯ ಜನಜೀವನ ಶೈಲಿ ಅನನ್ಯವಾಗಿದೆ. ಜನರು ಕೂಡ ಇಷ್ಟವಾದರು. ಭಾರತ ಹಾವಾಡಿಗರ ದೇಶ ಎಂಬ ಕಲ್ಪನೆ ಏಕೆ ಬಂತು ಎಂಬುದು ನನಗೆ ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.
ಫ್ಲಾರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್.ಸೀತಾರಾಂ ಅಯ್ಯಂಗಾರ್, ‘ಸಿ.ವಿ.ರಾಮನ್ ಅವರಿಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ಇದ್ದ ಆಸಕ್ತಿ ಅವರನ್ನು ದೊಡ್ಡ ವಿಜ್ಞಾನಿಯನ್ನಾಗಿ ಮಾಡಿತು. ಅವರು ನೀಡಿದ ಕೊಡುಗೆ ಅನೇಕ ವಿಷಯಗಳನ್ನು ಅರಿಯಲು ಅನುಕೂಲ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಕಾರ್ಯದರ್ಶಿ ಹಾಗೂ ಉದ್ಯಮಿ ಡಾ.ಪಿ.ಸದಾನಂದ ಮಯ್ಯ, ‘ವಿಜ್ಞಾನದಲ್ಲಿನ ಬೆಳವಣಿಗೆಗಳಿಂದ ಹಲವು ಅವಕಾಶಗಳು ಸೃಷ್ಟಿಯಾಗಿವೆ. ಕಷ್ಟಕರ ಕೆಲಸಗಳನ್ನು ಸುಲಭವಾಗಿಸಿದೆ. ಹೋಟೆಲ್ ಉದ್ಯಮಕ್ಕೂ ನೆರವಾಗಿದೆ. ಉದಾಹರಣೆಗೆ ಮೊಸರನ್ನವನ್ನು ಕೆಡದಂತೆ ಒಂದು ವರ್ಷ ಇಡಬಹುದಾದ ತಂತ್ರಜ್ಞಾನವಿದೆ’ ಎಂದು ಹೇಳಿದರು.
‘ಹುಟ್ಟುವಾಗ ಉಸಿರಿರುತ್ತದೆ, ಹೆಸರಿರುವುದಿಲ್ಲ. ಸತ್ತಾಗ ಉಸಿರಿರುವುದಿಲ್ಲ, ಹೆಸರಿರುತ್ತದೆ. ಹಾಗಾಗಿ ಹೆಸರು ಶಾಶ್ವತವಾಗಿ ಉಳಿಯುವಂಥ ಕೆಲಸ ಮಾಡಬೇಕು. ಭಿನ್ನ ಆಲೋಚನೆ ರೂಢಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.