ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಾಹಿತ್ಯದ ‘ಭೀಷ್ಮ’ಪ್ರಜ್ಞೆ

Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ನಿಮಗೆ ‘ತಮಸ್’ ಗೊತ್ತಲ್ಲ... ದೂರದರ್ಶನದ ಧಾರಾವಾಹಿಯಾಗಿ ನಮ್ಮನ್ನೆಲ್ಲ ಕಟ್ಟಿಕೂರಿಸುತ್ತಿದ್ದ ಅಷ್ಟೇ ಅಲ್ಲ, ರೊಚ್ಚು ನಿಟ್ಟುಸಿರುಗಳಿಗೆ ಕಾರಣವಾಗುತ್ತಿದ್ದ ಕಥಾನಕ.

ಅದು ಕಾಲ್ಪನಿಕವಲ್ಲ. 1947ರ ದೇಶ ವಿಭಜನೆಯ ನಂತರ ರಾವಲ್ಪಿಂಡಿಯಲ್ಲಿ ಕಂಡ ಘಟನಾವಳಿಗಳ ನೈಜ ಚಿತ್ರಣ. ಕಂಡದ್ದಷ್ಟೇ ಅಲ್ಲ, ಆ ಘಟನಾವಳಿಗಳಲ್ಲಿ ಸ್ವತಃ ಒಬ್ಬ ನಿರಾಶ್ರಿತನಾಗಿ ಲೇಖಕ ಎದುರಿಸಿದ ಅಗ್ನಿದಿವ್ಯದ ಯಥಾವತ್ ನಿರೂಪಣೆ. ಅದು 1974ರಲ್ಲಿ ಪ್ರಕಟಗೊಂಡು, ಭಾರತದ ಎಲ್ಲ ಭಾಷೆಗಳಿಗೂ ಅಷ್ಟೇ ಅಲ್ಲ, ಇಂಗ್ಲಿಷ್, ಜರ್ಮನ್, ಜಪಾನಿ, ಇತ್ಯಾದಿ ವಿದೇಶಿ ಭಾಷೆಗಳಿಗೂ ಅನುವಾದಗೊಂಡ ಕಾದಂಬರಿ. 1975ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕಾದಂಬರಿ ಧಾರಾವಾಹಿಯಾದದ್ದು ಮುಂದೆ ಹದಿಮೂರು ವರ್ಷಗಳ ನಂತರ. ಆ ನೋವು, ನಿರಾಸೆ, ನಿಟ್ಟುಸಿರು ಮತ್ತು ಅಂಥದರ ನಡುವೆಯೇ ನಡೆಯುವ ಅರ್ಥಹೀನ ಕೋಮು ರಾಜಕೀಯದ ಆ ದೃಶ್ಯಗಳು ಇಂದಿಗೂ ನಮ್ಮ ಕಣ್ಣಿಗೆ ಕಟ್ಟಿದಂತಿವೆ.

ಒಂದು ದೃಷ್ಟಿಯಲ್ಲಿ, ದೇಶವಿಭಜನೆಯ ನಂತರದ ಆ ರಕ್ತಸಿಕ್ತ ಇತಿಹಾಸದ ಸಾಕ್ಷಾತ್ ದರ್ಶನವನ್ನು ನಮಗೆ ಈ ಕಾದಂಬರಿಯ ಕರ್ತೃ ಭೀಷ್ಮ ಸಾಹ್ನಿ ‘ತಮಸ್’ ಕಾದಂಬರಿಯ ಮೂಲಕ ಮಾಡಿಸಿದ್ದಾರೆ ಎನ್ನಬಹುದು. (ಅವರ ‘ಪಲಿ’ ಮತ್ತು ‘ಅಮೃತಸರ್ ಆ ಗಯಾ ಹೈ’ ಎಂಬ ಎರಡು ಸಣ್ಣ ಕಥೆಗಳ ವಸ್ತು ಕೂಡ ದೇಶ ವಿಭಜನೆಯ ನಂತರದ ಸಂಕಷ್ಟಗಳೇ). ಭೀಷ್ಮ ಸಾಹ್ನಿ ಕಾದಂಬರಿ, ನಾಟಕ, ಸಣ್ಣ ಕಥೆ ಮತ್ತು ಸೃಜನೇತರ ಕೃತಿಗಳನ್ನು ನಮಗಿತ್ತ ಲೇಖಕ. ಅಷ್ಟೇ ಅಲ್ಲ, ಅವರೊಬ್ಬ ಮಾನವತಾವಾದಿ, ಶಿಕ್ಷಣತಜ್ಞ, ಸಾಮಾಜಿಕ ಕಾರ್ಯಕರ್ತ ಹಾಗೂ ರಂಗಭೂಮಿ ನಟ. ಇದೀಗ ಅವರ ಜನ್ಮಶತಮಾನೋತ್ಸವ ವರ್ಷ.

ಏಳನೆಯ ಸಂತಾನ 
ಭೀಷ್ಮ ಸಾಹ್ನಿ ಹುಟ್ಟಿದ್ದು ನೂರು ವರ್ಷಗಳ ಹಿಂದೆ (8 ಅಗಸ್ಟ್ 1915ರಂದು) ಈಗಿನ ಪಾಕಿಸ್ತಾನದ ರಾವಲ್ಪಿಂಡಿಯ ಮಧ್ಯಮವರ್ಗದ ಒಂದು ಸಾದಾ ಕುಟುಂಬದಲ್ಲಿ. ಅಪ್ಪನ ಹೆಸರು ಹರಬನ್ಸ್ ಲಾಲ್ ಸಾಹ್ನಿ; ಅವ್ವ ಲಕ್ಷ್ಮೀ ದೇವಿ. ಈ ದಂಪತಿಯ ಏಳನೆಯ ಸಂತಾನ ಭೀಷ್ಮ ಸಾಹ್ನಿ. ಸಾಹಿತ್ಯದಲ್ಲಿ ಎಳವೆಯಿಂದಲೇ ಆಸಕ್ತಿ ಮೂಡಿಸಿಕೊಂಡ ಭೀಷ್ಮ ಸಾಹ್ನಿ 1935ರಲ್ಲಿ ಲಾಹೋರಿನ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪಾಸು ಮಾಡಿದರು. ನಂತರ ಇಂದ್ರನಾಥ್ ಮದಾನ್ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ‘ಕಾದಂಬರಿಯಲ್ಲಿ ನಾಯಕ ಪಾತ್ರದ ಪರಿಕಲ್ಪನೆ’ ಎಂಬ ವಿಷಯವಾಗಿ ಪ್ರೌಢ ಪ್ರಬಂಧ ರಚಿಸಿ, ಡಾಕ್ಟರೇಟ್ ಸಂಪಾದಿಸಿದರು.

ವಿದ್ಯಾರ್ಥಿ ದೆಸೆಯಲ್ಲಿಯೇ ಭೀಷ್ಮ ಸಾಹ್ನಿ ಕಥೆಗಳ ರಚನೆಗೆ ತೊಡಗಿದ್ದರು. ಅವರ ಮೊದಲ ಕಥೆ ‘ಅಬಲಾ’ ಪ್ರಕಟಗೊಂಡದ್ದು ಕಾಲೇಜು ಪತ್ರಿಕೆ ‘ರಾವಿ’ಯಲ್ಲಿ. ಎರಡನೆಯ ಕಥೆ ‘ನೀಲೀ ಆಂಖೆ’ ಪ್ರಕಟವಾದದ್ದು ಅಮೃತ ರಾಯ್ ಸಂಪಾದಕತ್ವದ ‘ಹಂಸ’ ಪತ್ರಿಕೆಯಲ್ಲಿ. ಆ ವೇಳೆಗಾಗಲೇ ಮಹಾತ್ಮಾ ಗಾಂಧಿಯವರ ಚಳವಳಿ ಬಿರುಸು ಪಡೆದಿತ್ತು. ಭೀಷ್ಮ ಸಾಹ್ನಿ ಅದರತ್ತ ಆಕರ್ಷಿತರಾದದ್ದು ಸಹಜವೇ.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ಭೀಷ್ಮಜೀ 1942ರ ‘ಚಲೇ ಜಾವ್’ ಚಳವಳಿಯಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ಹೋರಾಟ ಬಿಸುಪಿನಿಂದ ಸಾಗುತ್ತಿದ್ದ ಸಂದರ್ಭದಲ್ಲಿಯೇ ಅವರ ವಿವಾಹ ಶೀಲಾ ಎಂಬಾಕೆಯೊಂದಿಗೆ ನೆರವೇರಿತು (1944). ಅದಾಗಿ ಮೂರು ವರ್ಷಗಳ ಮೇಲೆ, ದೇಶ ವಿಭಜನೆಯ ನಂತರದ ಕೋಮುಗಲಭೆಯ ಸಂದರ್ಭದಲ್ಲಿ ಕಾರ್ಯಕರ್ತನಾಗಿ ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಂಡರಲ್ಲ, ಅದುವೇ ಅವರ ‘ತಮಸ್’ ಕಾದಂಬರಿ ರಚನೆಗೆ ಹಿನ್ನೆಲೆ.

ಅಣ್ಣನ ಗರಡಿಯಲ್ಲಿ...
ರಂಗಭೂಮಿಯಲ್ಲಿ ಭೀಷ್ಮ ಸಾಹ್ನಿ ತುಂಬ ಗಂಭೀರವಾಗಿ ತೊಡಗಿಕೊಳ್ಳಲು ಅವರ ಅಣ್ಣ ಬಲರಾಜ್ ಸಾಹ್ನಿಯವರೇ ಕಾರಣ. ಆಗ ಬಲರಾಜ್ ಮುಂಬಯಿಯಲ್ಲಿ ‘ಇಂಡಿಯನ್ ಪೀಪಲ್ಸ್ ಥೇಟರ್ ಅಸೋಸಿಯೇಶನ್’ (IPTA)ದ ಪ್ರಮುಖ ಸದಸ್ಯ. ಸ್ವತಂತ್ರ ಭಾರತದಲ್ಲಿ ಸಾಂಸ್ಕೃತಿಕ ಕ್ರಾಂತಿಗೆ ಕಾರಣವಾಗಿ ನಿಂತದ್ದು ಈ ಸಂಸ್ಥೆ. 1949-50ರ ಅವಧಿಯಲ್ಲಿ ಭೀಷ್ಮ ಸಾಹ್ನಿ ಅಣ್ಣನ ದೇಖರಿಕಿ ಮತ್ತು ಮಾರ್ಗದರ್ಶನದಲ್ಲಿ ‘ಇಪ್ಟಾ’ದಲ್ಲಿ ತರಬೇತಿ ಪಡೆದರು. ಆಗಲೇ ಅವರು ಮಾರ್ಕ್ಸ್ ವಾದದ ಕಡೆಗೆ ಆಕರ್ಷಿತರಾದದ್ದು. ಮತ್ತು, ಆ ವಿಚಾರಧಾರೆಯ ಕುರಿತು ಗಂಭೀರವಾಗಿ ಯೋಚಿಸತೊಡಗಿದ್ದು. ಅದು ಅವರ ಬದುಕು ಮತ್ತು ಬರಹದ ಮೇಲೆಯೂ ಪರಿಣಾಮ ಬೀರಿತು.

1950ರಲ್ಲಿ ಭೀಷ್ಮ ಸಾಹ್ನಿ ದೆಹಲಿ ಕಾಲೇಜಿನಲ್ಲಿ (ಈಗದು ‘ಝಾಕೀರ್ ಹುಸೇನ್ ದೆಹಲಿ ಕಾಲೇಜು’) ಇಂಗ್ಲಿಷ್ ಉಪನ್ಯಾಸಕರಾಗಿ ಸೇರಿಕೊಂಡರು. ಮಾತೃಭಾಷೆ ಪಂಜಾಬಿಯಾದರೂ ಅವರು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ಸಂಸ್ಕೃತ ಮತ್ತು ರಶಿಯನ್ ಭಾಷೆಗಳಲ್ಲೂ ಅಷ್ಟೇ ಸುಲಲಿತವಾಗಿ ವ್ಯವಹರಿಸಬಲ್ಲವರಾಗಿದ್ದ ಅವರು ಸೃಜನಶೀಲ ಬರವಣಿಗೆಯನ್ನು ಕೈಗೊಂಡದ್ದು ಮಾತ್ರ ಹಿಂದಿಯಲ್ಲಿಯೇ. 1953ರಲ್ಲಿ ಅವರ ಮೊದಲ ಕಥಾಸಂಕಲನ 'ಭಾಗ್ಯರೇಖಾ' ಪ್ರಕಟವಾಯಿತು. ಅಲ್ಲಿಂದಾಚೆ ಅವರು ಬಿಟ್ಟೂಬಿಡದೇ ಬರವಣಿಗೆಯಲ್ಲಿ ತೊಡಗಿಕೊಂಡರು. ಕಥೆ, ಕಾದಂಬರಿ, ನಾಟಕ ಈ ಮೂರೂ ಪ್ರಕಾರಗಳಂತೂ ಸರಿಯೇ, ಜೀವನ ಚರಿತ್ರೆಯನ್ನು ಕೂಡ ನಮಗಿತ್ತರು.

ಮಾರ್ಕ್ಸ್‌ವಾದಿ ವಿಚಾರಧಾರೆ
ಭೀಷ್ಮ ಸಾಹ್ನಿ ತಮ್ಮ ಕೃತಿಗಳಲ್ಲಿ ಭಾರತದ ಸಾಮಾಜಿಕ, ರಾಜನೈತಿಕ ಮತ್ತು ಸಾಂಸ್ಕೃತಿಕ ವಿಸಂಗತಿಗಳ ಸ್ಪಷ್ಟ ಚಿತ್ರವನ್ನು ನೀಡುತ್ತ ಬಂದರು. ಈ ದೃಷ್ಟಿಕೋನ ಅವರ ಪ್ರಗತಿಶೀಲ ಮತ್ತು ಮಾರ್ಕ್ಸ್‌ವಾದಿ ವಿಚಾರಗಳ ಪ್ರತೀಕವೆನಿಸಿತ್ತು. ತಾವು ಬದುಕಿದ ರೀತಿ, ಎದುರಿಸಬೇಕಾಗಿ ಬಂದ ಪರಿಸ್ಥಿತಿ ಮತ್ತು ಆ ಪರಿಸ್ಥಿತಿಯ ವಿರುದ್ಧದ ಅವರ ಸಂಘರ್ಷ ಇವೆಲ್ಲವೂ ಅವರ ಕೃತಿಗಳಲ್ಲಿ ಪಡಿಮೂಡಿದವು. ಈ ಕಾರಣದಿಂದಾಗಿಯೇ ಅವರ ‘ರಚನಾ ಕರ್ಮ’ ಮತ್ತು ‘ಜೀವನ ಧರ್ಮ’ಗಳಲ್ಲಿ ವ್ಯತ್ಯಾಸವಿರಲಿಲ್ಲ. ಅವರು ಬರೆದಂತೆ ಬದುಕಿದರು; ಬದುಕನ್ನೇ ಬರೆದರು. ಮಾನವೀಯ ಮೌಲ್ಯ ಮತ್ತು ನೈತಿಕತೆಗಳು ಅವರ ಕೃತಿಗಳಲ್ಲಿ ಹಾಸುಹೊಕ್ಕಾಗಿರುವುದು ಯಾರಿಗಾದರೂ ಅನುಭವಕ್ಕೆ ಬರುವ ವಿಚಾರ.

ಜನವಾದಿ ಕಥಾ ಆಂದೋಲನದ ಮೂಲಕ ಭೀಷ್ಮ ಸಾಹ್ನಿಯವರು ಸಾಮಾನ್ಯ ಜನರ ಆಸೆ, ಆಕಾಂಕ್ಷೆ, ದುಃಖ, ದುಗುಡ-ದುಮ್ಮಾನಗಳು, ಅಭಾವ ಮತ್ತು ಸಂಘರ್ಷದ ವಿಡಂಬನೆಗಳನ್ನು ಸಹಜವಾಗಿಯೇ ತಮ್ಮ ಕಾದಂಬರಿಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸುತ್ತ ಬಂದರು.  1957ರಿಂದ 1963ರವರೆಗೆ ಭೀಷ್ಮ ಸಾಹ್ನಿ ಮಾಸ್ಕೋದ ‘ಫಾರೆನ್ ಲ್ಯಾಂಗ್ವೇಜ್ ಪಬ್ಲಿಷಿಂಗ್ ಹೌಸ್’ನಲ್ಲಿ ರಶಿಯನ್ ಕೃತಿಗಳನ್ನು ಆ ಭಾಷೆಯಿಂದ ಹಿಂದಿಗೆ ಅನುವಾದಿಸುವ ಹೊಣೆ ನಿರ್ವಹಿಸಿದರು. ಜತೆಗೇ, ಸ್ವಂತದ ಕೃತಿ ರಚನೆಯಂತೂ ಮುಂದುವರಿದೇ ಇತ್ತು.

ಅನನ್ಯ ಕಥೆಗಾರ
ಅವರ ಲೇಖನಿಯಿಂದ ಮೂಡಿಬಂದ ಕೃತಿಗಳಲ್ಲಿ ಕಥೆಗಳೇ ಹೆಚ್ಚು. ‘ಭಾಗ್ಯರೇಖಾ’, ‘ಪಟರಿಯಾ’, ‘ಪೆಹಲಾ ಪಾಠ’, ‘ಭಟಕತೀ ರಾಖ್’, ‘ವಾಡ್.ಚೂ’, ‘ಶೋಭಾಯಾತ್ರಾ’, ‘ನಿಶಾಚರ್’ ಮತ್ತು ‘ಪಾಲಿ’– ಇವು ಅವರ ಕಥಾಸಂಗ್ರಹಗಳು. ಇವಲ್ಲದೇ, ಅವರ ‘ಪ್ರತಿನಿಧಿ ಕಹಾನಿಯಾಂ’ ಮತ್ತು ‘ಮೇರೀ ಪ್ರಿಯ ಕಹಾನಿಯಾಂ’ ಎಂಬ ಕಥಾಸಂಗ್ರಹಗಳೂ ಹೊರಬಂದಿವೆ. ‘ಝರೋಖೇ’, ‘ಕಡಿಯಾಂ’, ‘ತಮಸ್’, ‘ಬಸಂತೀ’, ‘ಮಯ್ಯಾದಾಸ್ ಕಿ ಮಾಡೀ’, ‘ಕುಂತೋ’ ಹಾಗೂ ‘ನೀಲೂ ನೀಲಿಮಾ ನಿಲೋಫರ್’ ಇವು ಭೀಷ್ಮ ಸಾಹ್ನಿಯವರ ಕಾದಂಬರಿಗಳು. ‘ಹಾನೂಶ್’, ‘ಕಬಿರಾ ಖಡಾ ಬಜಾರ್ ಮೇಂ’, ‘ಮಾಧವಿ’, ‘ಮುಆವಜೇ’ ಮತ್ತು ‘ಆಲಮ್ ಗೀರ್’ ಇವು ಅವರ ನಾಟಕಗಳು.


ಸೃಜನಶೀಲ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೈ ಆಡಿಸಿರುವ ಭೀಷ್ಮ ಸಾಹ್ನಿಯವರು ತಮ್ಮ ಕೊನೆಯ ದಿನಗಳಲ್ಲಿ ‘ಆಜ್ ಕೇ ಅತೀತ್’ ಹೆಸರಿನಲ್ಲಿ ಆತ್ಮಕಥೆ ಬರೆದರು. ತಮ್ಮ ಕೃತಿಗಳಲ್ಲಿ ಅವರು ಮಹಿಳೆಯ ವ್ಯಕ್ತಿತ್ವ ವಿಕಾಸ, ಏಕಾಧಿಕಾರ,  ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ, ಸ್ತ್ರೀ ಶಿಕ್ಷಣ ಮತ್ತು ಆಕೆಯ ಸಾಮಾಜಿಕ ಹೊಣೆಗಳಲ್ಲದೇ, ಆಕೆ ಯಾವ ಅಂಜಿಕೆಯೂ ಇಲ್ಲದೇ ಮರ್ಯಾದೆಯಿಂದ ಬಾಳುವಂಥ ಸ್ಥಿತಿಯ ನಿರ್ಮಾಣದ ಅವಶ್ಯಕತೆಯ ಕುರಿತು ಪ್ರತಿಪಾದಿಸುತ್ತಾರೆ.        
 
ರಾಜಕೀಯದ ಟೀಕಾಕಾರ

ರಾಜಕೀಯ ಗುಂಪುಗಳಿಂದ ದೂರವಿದ್ದವರು ಭೀಷ್ಮ ಸಾಹ್ನಿ. ಆದರೆ ಭಾರತೀಯ ರಾಜನೀತಿಯಲ್ಲಿ ನಿರಂತರವಾಗಿ ವೃದ್ಧಿಸುತ್ತಿರುವ ಭ್ರಷ್ಟಾಚಾರ, ಪುಢಾರಿಗಳ ಪಾಖಂಡಿತನ, ಚುನಾವಣೆ ಸಂದರ್ಭಗಳ ಸೋಗುಗಳು, ರಾಜನೀತಿಯಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸುವಿಕೆ, ಮೂಲಭೂತವಾದ, ಜಾತಿವಾದದ ದುರುಪಯೋಗ, ಕುಟುಂಬ ರಾಜಕಾರಣ, ನೈತಿಕ ಮೌಲ್ಯಗಳ ಪತನ, ತೀರ ಕೆಳಸ್ತರದಿಂದಲೇ ಭ್ರಷ್ಟಾಚಾರದ ಬೀಜ ಬಿತ್ತಿ ಅದನ್ನು ನೀರೆರೆದು ಪೋಷಿಸುವುದು, ಪೊಳ್ಳು ಆದರ್ಶಗಳನ್ನು ಬಿಂಬಿಸುವಿಕೆ, ಸುಳ್ಳು ಭರವಸೆಗಳನ್ನು ನೀಡುವಿಕೆ ಇವೇ ಮುಂತಾದವುಗಳ ಚಿತ್ರಣವನ್ನು ತಮ್ಮ ಕೃತಿಗಳಲ್ಲಿ ನೀಡುತ್ತ ಬಂದರು. ಭೀಷ್ಮ ಸಾಹ್ನಿಯವರ ಅನನ್ಯ ಸಾಮಾಜಿಕ ಕಳಕಳಿ ಆ ದಿಶೆಯ ಅವರ ಪ್ರಾಮಾಣಿಕವಾದ ಯೋಚನೆಯ ಫಲ. 

ತಮ್ಮ 69ನೆಯ ವಯಸ್ಸಿನಲ್ಲಿ ಭೀಷ್ಮ ಸಾಹ್ನಿ ಮತ್ತೊಂದು ಕ್ಷೇತ್ರದಲ್ಲಿ ಕಾಲಿರಿಸಿದರು. ಅದೆಂದರೆ ಚಲನಚಿತ್ರಗಳಲ್ಲಿ ಅಭಿನಯ. ಹೊಸ ಅಲೆಯ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾರ ‘ಮೋಹನ್ ಜೋಶಿ ಹಾಜಿರ್ ಹೋ’ ಭೀಷ್ಮಜೀ ಅಭಿನಯದ ಮೊದಲ ಚಿತ್ರ (1984). ಕೊನೆಯ ಚಿತ್ರ ಅಪರ್ಣಾ ಸೆನ್ ನಿರ್ದೇಶನದ ಬಹುಪ್ರಶಂಸಿತ ‘ಮಿ ಅಂಡ್ ಮಿಸೆಸ್ ಅಯ್ಯರ್’ (2002). ಈ ಚಿತ್ರದಲ್ಲಿ ಅವರದು ಒಂದು ಬಸ್ಸಿನಲ್ಲಿ ತನ್ನ ಪತ್ನಿಯೊಂದಿಗೆ ಪಯಣಿಸುತ್ತಿರುವಾಗ ಗಲಭೆಯಾಗಿ ಹಿಂದು ಮೂಲಭೂತವಾದಿಯೊಬ್ಬನ ಗುಂಡಿಗೆ ಬಲಿಯಾಗುವ ಸಹೃದಯಿ ಮುಸ್ಲಿಂ ವೃದ್ಧನ ಪಾತ್ರ. ಕುಮಾರ್ ಸಾಹ್ನಿಯ ‘ಕಸಬಾ’ (1969) ಸಿನಿಮಾದ ಚಿತ್ರಕಥಾ ಲೇಖಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಇದು ಆಂಟನ್ ಚೆಕೊವ್ ಬರೆದ ‘ಇನ್ ದಿ ಗಲಿ’ ಕಥೆಯನ್ನು ಆಧರಿಸಿದ್ದು.

ಪ್ರಶಸ್ತಿಗಳು
ಪ್ರಚಾರ-ಪ್ರಸಿದ್ಧಿಗಳಿಂದ ಗಾವುದ ದೂರವೇ ಇದ್ದ ಈ ಪ್ರಖರ ವಿಚಾರವಾದಿಯನ್ನು ಪ್ರಶಸ್ತಿಗಳು ತಾವಾಗಿಯೇ ಅರಸಿಕೊಂಡು ಬಂದವು. ‘ಪದ್ಮಶ್ರೀ’, ‘ಪದ್ಮಭೂಷಣ’ ಹಾಗೂ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಅವರಿಗೆ ಸಂದ ಪ್ರಮುಖ ಗೌರವಗಳು. ಕೊನೆಯುಸಿರಿನವರೆಗೂ ತುಳಿತಕ್ಕೊಳಗಾದವರ ಕ್ಷೇಮಾಭಿವೃದ್ಧಿಯ ಕುರಿತೇ ಯೋಚಿಸಿ, ಆ ದಿಶೆಯಲ್ಲಿ ಕಾರ್ಯಪ್ರವೃತ್ತರಾದ ಭೀಷ್ಮ ಸಾಹ್ನಿ 2002ರ ಜುಲೈ 11ರಂದು ದೆಹಲಿಯಲ್ಲಿ ನಿಧನರಾದರು.  

*
ಕನ್ನಡಕ್ಕೆ ಹೊಸಬರಲ್ಲ 
ಭೀಷ್ಮ ಸಾಹ್ನಿ ಕನ್ನಡಕ್ಕೇನೂ ಹೊಸಬರಲ್ಲ. ಅವರ ಎಂಟು ಕೃತಿಗಳು ಈಗಾಗಲೇ ಕನ್ನಡಕ್ಕೆ ಅನುವಾದಿಸಲ್ಪಟ್ಟಿವೆ. ‘ತಮಸ್’, ‘ಮೈಯಾದಾಸನ ವಾಡೆ’, ‘ಬಸಂತಿ’, ‘ಗವಾಕ್ಷಿ’ (ಕಾದಂಬರಿಗಳು) ಕನ್ನಡಕ್ಕೆ ಬಂದಿವೆ. ನಾಟಕಗಳ ಪೈಕಿ ‘... ಕಬೀರ...' ಕನ್ನಡದಲ್ಲಿ ಎರಡು ಅನುವಾದಗಳನ್ನು ಕಂಡಿದೆ. ಒಂದು, ಪ್ರೊ. ಟಿ.ಎಸ್. ಲೋಹಿತಾಶ್ವ ಅವರ ಅನುವಾದ (‘ಸಂತೆಯಲ್ಲಿ ನಿಂತ ಕಬೀರ’), ಮತ್ತೊಂದು ಗೋಪಾಲ ವಾಜಪೇಯಿ ಅವರ ಅನುವಾದ (‘ಸಂತ್ಯಾಗ ನಿಂತಾನ ಕಬೀರ...’). ಇದು ನೂರಾರು ಪ್ರಯೋಗಗಳನ್ನು ಕಂಡಿವೆ. ಇದೀಗ ಈ ನಾಟಕವನ್ನು ಆಧರಿಸಿ ಕನ್ನಡದಲ್ಲಿ ‘ಸಂತೆಯಲ್ಲಿ ನಿಂತ ಕಬೀರ’ ಎಂಬ ಸಿನಿಮಾ ನಿರ್ಮಾಣದ ಕೊನೆಯ ಹಂತದಲ್ಲಿದೆ. ಇದು ಭೀಷ್ಮ ಸಾಹ್ನಿಯವರ ಜನ್ಮಶತಮಾನೋತ್ಸವಕ್ಕೆ ಕನ್ನಡ ಚಿತ್ರರಂಗದ ಕಾಣಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT