ನವದೆಹಲಿ (ಪಿಟಿಐ): ಭಾರತ–ಚೀನಾ ಗಡಿಯಲ್ಲಿ ಕಾವಲನ್ನು ಭದ್ರಪಡಿಸುವ ಸಲುವಾಗಿ ಇಂಡೋ–ಟಿಬೆಟ್ ಗಡಿ ಪೊಲೀಸ್ ಪಡೆಗೆ (ಐಟಿಬಿಪಿ) 12 ಹೊಸ ತುಕಡಿಗಳನ್ನು ಸೇರಿಸಲು ಸೇನೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಅರುಣಾಚಲ ಪ್ರದೇಶದಲ್ಲಿ ಭಾರತ–ಚೀನಾ ಗಡಿಯ ಕಣ್ಗಾವಲನ್ನು ಹೆಚ್ಚಿಸುವ ಸಲುವಾಗಿ 12 ಹೊಸ ತುಕಡಿಗಳ ಅವಶ್ಯಕತೆಯಿದೆ ಎಂದು ಸೇನೆಯು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿತ್ತು. ಕಳೆದ ವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ 54 ಹೊಸ ಗಡಿ ಠಾಣೆಗಳನ್ನು ಸ್ಥಾಪಿಸುವುದಾಗಿ ಹೇಳಿದ್ದರು.ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ₨ 175 ಕೋಟಿಯ ಯೋಜನೆ ಘೋಷಿಸಿದ್ದರು.
ಹೊಸದಾಗಿ ನಿರ್ಮಿಸಲಾಗುವ 54 ಗಡಿ ಠಾಣೆಗಳಲ್ಲಿ ನಿಯೋಜಿಸಲು 12 ಸಾವಿರ ಯೋಧರ ನೇಮಕಕ್ಕೆ ತಾತ್ವಿಕ ಒಪ್ಪಿಗೆ ದೊರೆತಿದೆ.
ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅಂತಿಮ ಅನುಮೋದನೆಗಾಗಿ ಸೇನೆ ಕಾಯುತ್ತಿದೆ. 12 ತುಕಡಿಗಳ ನೇಮಕ ಮತ್ತು ನಿಯೋಜನೆಯು ವಿವಿಧ ಹಂತಗಳಲ್ಲಿ ನಡೆಯಲಿದೆ.