ಕಠ್ಮಂಡು (ಐಎಎನ್ಎಸ್): ಭಾರತ ಮುಂದಾದಲ್ಲಿ ಸ್ಥಗಿತಗೊಂಡಿರುವ ಮಾತುಕತೆ ಪುನರ್ ಆರಂಭಿಸಲು ಸಿದ್ಧವಿರುವುದಾಗಿ ಪಾಕಿಸ್ತಾನ ಮಂಗಳವಾರ ಹೇಳಿದೆ. ಆದರೆ, ಮಾತುಕತೆ ಪುನರ್ ಆರಂಭಕ್ಕೆ ಭಾರತವೇ ಮೊದಲ ಹೆಜ್ಜೆಯನ್ನು ಇಡಬೇಕು ಎಂಬ ಷರತ್ತು ಒಡ್ಡಿದೆ.
ಇಲ್ಲಿಗೆ ಆಗಮಿಸಿದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಭಾರತವೇ ರದ್ದುಗೊಳಿಸಿತ್ತು. ಹೀಗಾಗಿ ಸ್ಥಗಿತಗೊಂಡಿರುವ ಮಾತುಕತೆ ಮರಳಿ ಆರಂಭಿಸಲು ಭಾರತವೇ ಮುಂದಾಗಬೇಕು ಎಂದರು.
ಇದಕ್ಕೂ ಮೊದಲು ಪಾಕಿಸ್ತಾನ ಪ್ರಧಾನಿಯ ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್, ಷರೀಫ್– ಮೋದಿ ಭೇಟಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಮಾತುಕತೆಗೆ ಅಧಿಕೃತ ಆಹ್ವಾನ ನೀಡಿದಾಗ ಮಾತ್ರ ಉಭಯ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಮಾತುಕತೆ ಸಾಧ್ಯ. ಎಲ್ಲವೂ ಭಾರತದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದರು.
ಇದಕ್ಕೂ ಮೊದಲು ಮುಖಾಮುಖಿಯಾದ ಸುಷ್ಮಾ ಸ್ವರಾಜ್ ಹಾಗೂ ಅಜೀಜ್ ಹಸ್ತಲಾಘವ ನೀಡಿ, ಶುಭಾಶಯ ವಿನಿಮಯ ಮಾಡಿಕೊಂಡರು.