ಇಂದು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಇದಕ್ಕೆ ಶಿಕ್ಷಕರ ಅದಕ್ಷತೆ, ಇಲ್ಲದ ಸೌಲಭ್ಯ, ಶಿಕ್ಷಕರ ಕೊರತೆ ಹಾಗೂ ಇತರ ಅಂಶಗಳು ಕಾರಣ. ಇಂತಹ ಸಂದರ್ಭದಲ್ಲಿ, ಶಿಕ್ಷಕ ತರಬೇತಿ ಮುಗಿಸಿ ತಮ್ಮ ಕನಸಿನ ವೃತ್ತಿಗೆ ಸೇರಲು ಹಾತೊರೆಯುತ್ತಿರುವ ಲಕ್ಷಾಂತರ ಯುವ ಅಭ್ಯರ್ಥಿಗಳಿಗೆ ‘ನಿವೃತ್ತಿಯಾಗುವ ಶಿಕ್ಷಕರ ಮುಂದುವರಿಕೆ’ ಎಂಬ ಸುದ್ದಿ (ಪ್ರ.ವಾ., ಜೂನ್ 26) ಓದಿ ಬಹಳಷ್ಟು ನಿರಾಸೆಯಾಗಿದೆ.
ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣ ನೀಡಿ ತಮ್ಮ ಈ ನಿರ್ಧಾರವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಸಚಿವರಿಗೆ ನಿಜವಾಗಿಯೂ ಆ ಭಾವನೆ ಇದ್ದಿದ್ದರೆ ತಕ್ಷಣವೇ ಕಾಯಂ ಶಿಕ್ಷಕರ ನೇಮಕಾತಿ, ಶಿಕ್ಷಕರ ಕಾರ್ಯದಕ್ಷತೆ ಮತ್ತು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಹಾಗೆ ಮಾಡದೆ ಶಿಕ್ಷಕರ ನೇಮಕಾತಿಗೆ ಇನ್ನೂ ಒಂದೂವರೆ ವರ್ಷ ಬೇಕಾಗುತ್ತದೆ ಎಂಬ ಹೇಳಿಕೆ ನೀಡಿರುವುದು ಎಷ್ಟು ಸರಿ?
- ಮಂಜುನಾಥ ಜೆ.ಎ., ಜಂಗಮಕೋಟೆ