ಬೆಂಗಳೂರಿನಲ್ಲಿ ಮಣಿಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ (ಪ್ರ.ವಾ., ಅ.16) ನನ್ನ ಪ್ರತಿಕ್ರಿಯೆ. ಭಾರತದ ಈಶಾನ್ಯ ರಾಜ್ಯಗಳು ಒಂದು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಅಲ್ಲಿನ ನಾಗರಿಕರು ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರವಿರುವುದರಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ನೇರ ಜವಾಬ್ದಾರಿ ಇದೆ.
ಚೀನಾ ಮತ್ತು ಬಾಂಗ್ಲಾ ದೇಶಗಳ ನಿರಂತರ ಅತಿಕ್ರಮಣದ ಷಡ್ಯಂತ್ರಕ್ಕೆ ಅಲ್ಲಿನ ಜನರು ಬಲಿಯಾಗಿದ್ದಾರೆ. ಇದರ ಜೊತೆಗೆ ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳಲ್ಲಿ ಬಂಡುಕೋರ ಗುಂಪುಗಳ ನಡುವೆ ಸಂಘರ್ಷವೂ ನಡೆದಿದೆ. ಈ ಪರಿಸ್ಥಿತಿಯಲ್ಲಿ ಈಶಾನ್ಯ ಭಾರತ ದವರನ್ನು ಮುಖ್ಯವಾಹಿನಿಗೆ ಕರೆ ತರಲು, ದೇಶದ ಉಳಿದ ಭಾಗಗಳ ನಾಗರಿಕರು ಪೂರಕ ಮನೋಭಾವ ರೂಢಿಸಿಕೊಳ್ಳಬೇಕಾಗಿದೆ.
ಈ ತಿಂಗಳ 15ರಂದು ಪಾನಮತ್ತ ಗುಂಪೊಂದು ಮಣಿಪುರ ವಿದ್ಯಾರ್ಥಿಗಳ ಮೇಲೆ ಯಾವುದೋ ನೆಪದಲ್ಲಿ ಹಲ್ಲೆ ನಡೆಸಿರುವುದು ಅಮಾನವೀಯ, ಖಂಡನಾರ್ಹ. ಈ ಘಟನೆಯನ್ನು ಭಾಷೆಯ ನೆಲೆಯಲ್ಲಿ ನೋಡುವುದು ಸರಿಯಲ್ಲ. ಬೆಂಗಳೂರಿನ ಜನರು ಶಾಂತ ಸ್ವಭಾವಕ್ಕೆ ಹೆಸರಾದವರು.
ಇಲ್ಲಿ ನೌಕರಿಗಳಲ್ಲಿ ತೊಡಗಿಸಿಕೊಂಡಿರುವ ಅನ್ಯರಾಜ್ಯಗಳ ಜನರಲ್ಲಿ ಈಶಾನ್ಯ ಭಾರತೀಯರ ಸಂಖ್ಯೆ ಗಣನೀಯವಾಗಿದೆ. ಅನೇಕರು ಹಿಂದಿ ಮತ್ತು ಕನ್ನಡ ಕಲಿತು ಸಹಬಾಳ್ವೆ ಮಾಡುತ್ತಿದ್ದಾರೆ. ಅವರು ಯಾರೂ ಕರ್ನಾಟಕ ವಿರೋಧಿಗಳಾಗಲಿ, ಕನ್ನಡ ವಿರೋಧಿಗ-ಳಾಗಲಿ ಅಲ್ಲ. ಅಪಪ್ರಚಾರದ ಗಾಳಿಸುದ್ದಿಗೆ ಹೆದರಿ ಕಳೆದ ವರ್ಷ ಈಶಾನ್ಯ ಭಾರತೀಯರು ಬೆಂಗಳೂರಿನಿಂದ ಗುಳೆ ಹೊರಟಂಥ ಘಟನೆಗಳು ಕನ್ನಡನಾಡಿನಲ್ಲಿ ಮರುಕಳಿಸದಿರಲಿ.