ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪನ; ಗಂಡಾಂತರದ ಮುನ್ಸೂಚನೆ?

ಅಭಿವೃದ್ಧಿ ಯೋಜನೆಗಳಿಗಾಗಿ ಪಶ್ಚಿಮಘಟ್ಟದ ಒಡಲಿಗೆ ಪೆಟ್ಟು
Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಕಲೇಶಪುರ: ಪಶ್ಚಿಮಘಟ್ಟದ ಸೆರಗಿ ನಲ್ಲಿ ರುವ ಕೊಡಗು, ಸಕಲೇಶಪುರ ಹಾಗೂ ಮೂಡಿಗೆರೆ ಮಲೆನಾಡು ಪ್ರದೇಶದಲ್ಲಿ ಫೆ. 25ರಂದು ಬೆಳಿಗ್ಗೆ 6 ಗಂಟೆ 58 ನಿಮಿಷದಲ್ಲಿ ಸುಮಾರು 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟ ಹಾಳು ಮಾಡುತ್ತಿರುವ ಪರಿಣಾಮ ಇದು ಎಂಬ ಭಯ ಹುಟ್ಟಿಸಿದೆ.

ಬೃಹತ್‌ ಜಲ ವಿದ್ಯುತ್‌ ಯೋಜ ನೆಗಳು, ಎತ್ತಿನಹೊಳೆ ತಿರುವು ಯೋಜನೆ, ಪೆಟ್ರೋಲಿಯಂ ಪೈಪ್‌ಲೈನ್‌ ಯೋಜನೆಗಳು ಪಶ್ಚಿಮಘಟ್ಟ ಪ್ರದೇಶ  ವನ್ನೇ ನಡುಗಿಸುತ್ತಿವೆ. ಇದರಿಂದ ಮನುಷ್ಯ, ಪ್ರಾಣಿ, ಸಸ್ಯರಾಶಿ ಸೇರಿದಂತೆ ಇಡೀ ಜೈವಿಕ ವ್ಯವಸ್ಥೆಯಲ್ಲೇ ತಲ್ಲಣ ಮೂಡಿದೆ.
ಕಳೆದೊಂದು ದಶಕದಿಂದ ಪಶ್ಚಿಮ ಘಟ್ಟದ ರಕ್ಷಿತ ಅರಣ್ಯ ಗರ್ಭದಲ್ಲಿ ಹತ್ತಾರು ಜಲ ವಿದ್ಯುತ್‌ ಯೋಜನೆ ಗಳಿಗಾಗಿ ಸಾವಿರಾರು ಹೆಕ್ಟೇರ್‌ ಮಳೆಕಾಡು ನಾಶವಾಗಿದೆ.

ಕಾಡಿನೊಳಗೆ ಸುರಂಗ ಹಾಗೂ ಅಣೆಕಟ್ಟೆ ಕಟ್ಟುವ ಕಾಮಗಾರಿಯಲ್ಲಿ ಸಿಡಿಸುವ ಭಾರಿ ಸ್ಫೋಟಕಗಳಿಂದ ಭೂಮಿಯೇ ಬಿರುಕು ಬಿಡುತ್ತಿದೆ.ಹರಿಯುವ ನೀರನ್ನು ತಡೆದು  ಅಣೆಕಟ್ಟೆಗಳಲ್ಲಿ ನಿಲ್ಲಿಸಲಾಗಿದೆ. ಕಾಡು ಮಾಯವಾಗಿ ಅಲ್ಲೆಲ್ಲಾ ಸಣ್ಣ ವಿದ್ಯುತ್‌ ಉತ್ಪಾದನೆಯ ಕೈಗಾರಿಕಾ ಘಟಕಗಳೇ ತಲೆ ಎತ್ತಿವೆ. ಇದರ ಬೆನ್ನ ಹಿಂದೆಯೇ ಇದೀಗ ಪಶ್ವಿಮಘಟ್ಟವನ್ನು ಬುಡ ಮೇಲು ಮಾಡಲು ಎತ್ತಿನಹೊಳೆ ತಿರುವು ಯೋಜನೆ ಶುರುವಾಗಿದೆ!

ಎತ್ತಿನಹೊಳೆ ತಿರುವು ಯೊಜನೆಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಆದರೆ, ಈ ಯೋಜನೆ ಅನುಷ್ಠಾನ ಗೊಳ್ಳುತ್ತಿರುವುದು ಜೀವ ವೈವಿಧ್ಯದ ಅತ್ಯಂತ ಸೂಕ್ಷ್ಮ ಮಳೆಕಾಡುಗಳು ಮತ್ತು ದಕ್ಷಿಣ ಭಾರತದ ನೀರಿನ ಟ್ಯಾಂಕ್‌ ಆಗಿರುವ ಪಶ್ಚಿಮಘಟ್ಟದಲ್ಲಿ. ಈ ಯೋಜನೆಯಿಂದ ಭೂಮಿಯ ಶಿಲಾ ಪದರ ಹಾಗೂ ನೀರಿನ ಸೆಲೆಗಳೇ ನಾಶವಾಗಿ ಮಳೆ ಕಡಿಮೆಯಾಗುತ್ತದೆ.

ಒಂದು ದಶಕದ ಹಿಂದೆ ಬೀಳುತ್ತಿದ್ದ ಮಳೆ ಪ್ರಮಾಣದಲ್ಲಿ ಶೇ 30 ಭಾಗ ಈಗಾಗಲೇ ಕಡಿಮೆಯಾಗಿದೆ.  ನೇತ್ರಾ ವತಿ, ಗುಂಡ್ಯ, ಹೇಮಾವತಿ ಉಪ ನದಿಗಳು ಕಿರುನದಿಗಳು, ಹಳ್ಳಕೊಳ್ಳ ಗಳಲ್ಲಿ ಹಿಂದೆ ವರ್ಷದ 8 ತಿಂಗಳು ನೀರು ಹರಿಯುತ್ತಿದ್ದು, ಈಗ ಸರಿಯಾಗಿ 5 ತಿಂಗಳು ಸಹ ನೀರು ಹರಿಯುತ್ತಿಲ್ಲ. ಮಲೆನಾಡಿನಲ್ಲಿ ತೆರೆದ ಬಾವಿಗಳಲ್ಲಿ ನೀರಿಲ್ಲದೆ ಅಂತರ್ಜಲದ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ.
‘ಈ ಯೋಜನೆಯಿಂದ₹ 13 ಸಾವಿರ ಕೋಟಿ ವ್ಯರ್ಥ. ಕರಾವಳಿ ಹಾಗೂ ಪಶ್ಚಿಮಘಟ್ಟವನ್ನೇ ಬಲಿ ಕೊಡಲಾ ಗುತ್ತಿದೆ’ ಎಂದು ಪರಸ ರವಾದಿ ಸೋಮಶೇಖರ್‌ ಹೇಳುತ್ತಾರೆ.

‘ತಾಲ್ಲೂಕಿನ ಕುಂಬರಡಿ ಮತ್ತು ಕೆಸಗಾನಹಳ್ಳಿಯಲ್ಲಿ ಸುಮಾರು 20 ಎಕರೆಗಳಿಗೂ ಹೆಚ್ಚು ಪ್ರದೇಶದಲ್ಲಿ ಗುಡ್ಡಗಳನ್ನೇ ಸೀಳಿ, ಭೂಮಿ ಬಗೆಯ ಲಾಗಿದೆ. ನೆಲದ ಗರ್ಭದಲ್ಲಿ ಬೆಚ್ಚಗಿದ್ದ ಕಲ್ಲುಗಳನ್ನು ಕಿತ್ತು ಪಶ್ಚಿಮಘಟ್ಟದ ನೈಸರ್ಗಿಕ ವ್ವವಸ್ಥೆಯನ್ನು ಹಾಳು ಮಾಡಲಾಗಿದೆ. ಇದೇ ರೀತಿ ಇನ್ನೂ 8 ಅಣೆಕಟ್ಟೆಗಳ ನಿರ್ಮಾಣಕ್ಕೆ ಯೋಚಿಸ ಲಾಗಿದೆ. ಇದು ಭಾರಿ ಪ್ರಮಾಣದ ಗಂಡಾಂತರಕ್ಕೆ ಕಾರಣವಾಗುತ್ತದೆ’ ಎಂದು ಜನಸ್ಪಂದನ ವೇದಿಕೆ ಅಧ್ಯಕ್ಷ ಅರುಣ್‌ ರಕ್ಷಿದಿ ಹೇಳುತ್ತಾರೆ.

ಭೂಕಂಪನದ ನಂತರ ಪಶ್ಚಿಮ ಘಟ್ಟದ ಸೆರಗಿನಲ್ಲಿ ವಾಸ ಮಾಡು ವವರಿಗೆ ಅಭಿವೃದ್ಧಿ ಯೋಜನೆಗಳಿಂದ ಉಂಟಾಗಬಹುದಾದ ಭಯ ಶುರು ವಾಗಿದೆ. ಎಲ್ಲಾ ಯೋಜನೆಗಳನ್ನು ಸಾಮೂಹಿಕವಾಗಿ ವಿರೊಧಿಸಲು ಹೆಬ್ಬಸಾಲೆ, ಆಲುವಳ್ಳಿ, ಕಡಗರವಳ್ಳಿ, ನಾಗರ, ಅಚ್ಚನಹಳ್ಳಿ, ದೇವಲಕೆರೆ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಸಂಘಟನೆಗೆ ಸಜ್ಜಾಗಿದ್ದಾರೆ.

ನೀರು ಶೇಖರಣೆ ಒತ್ತಡವೂ ಕಾರಣ
ಪಶ್ಚಿಮಘಟ್ಟದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿಶೇಷವಾಗಿ ಶರಾವತಿ, ಕಾಳಿ ನದಿಗಳಿಗೆ ಅಣೆಕಟ್ಟೆಗಳನ್ನು ಕಟ್ಟಿರುವುದರಿಂದ ಮಳೆಗಾಲದಲ್ಲಿ ಹೆಚ್ಚು ನೀರು ಶೇಖರಣೆಯಾಗಿ ಭೂಮಿಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ 100ರಿಂದ 120 ಬಾರಿ ಜನರಿಗೆ ಗೊತ್ತಾಗದ ಹಾಗೆ ಭೂ ಕಂಪನಗಳು ಆಗುತ್ತಿವೆ.

ಪಶ್ಚಿಮಘಟ್ಟದ ಭೂಮಿಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮೂರು ಬಿರುಕುಗಳಿವೆ (ಲಿನ್ಯಾಮೆಂಟ್‌). ಹೀಗಾಗಿ, ಪಶ್ಚಿಮಘಟ್ಟದ ಭೂಮಿ ಮೇಲೆ ಒತ್ತಡ ತರುವಂತಹ ಯಾವುದೇ ಯೋಜನೆಗಳನ್ನು ಮಾಡಬಾರದು ಎಂದು ಕೈಗಾ ಅಣುಸ್ಥಾವರ ಸಂದರ್ಭದಲ್ಲಿ ಸೆಲೆಕ್ಷನ್‌ ಕಮಿಟಿ ಹಾಗೂ ಪರಿಸರ ಪರಿಣಾಮ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
– ಹನುಮಂತರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT