ನವದೆಹಲಿ, ಪಟ್ನಾ(ಪಿಟಿಐ): ಉತ್ತರ ಹಾಗೂ ಪೂರ್ವ ಭಾರತದ ವಿವಿಧ ರಾಜ್ಯಗಳಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪನಕ್ಕೆ 34 ಮಂದಿ ಮೃತರಾಗಿದ್ದು, 100 ಮಂದಿ ಗಾಯಗೊಂಡಿದ್ದಾರೆ. ತುರ್ತು ಪರಿಹಾರ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ತೆರಳಿವೆ.
ಬಿಹಾರದಲ್ಲಿ 23 ಮಂದಿ, ಉತ್ತರ ಪ್ರದೇಶದಲ್ಲಿ ಎಂಟು ಮಂದಿ, ಪಶ್ಚಿಮ ಬಂಗಾಳದಲ್ಲಿ ಮೂವರು ಸಾವಿಗೀಡಾಗಿದ್ದಾರೆ. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಎಲ್.ಸಿ. ಗೋಯಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಲಾ 45 ಜನರನ್ನೊಳಗೊಂಡ ಐದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ರಕ್ಷಣಾ ಕಾರ್ಯಕ್ಕೆ ತೆರಳಿವೆ ಎಂದು ಅವರು ಮಾಹಿತಿ ನೀಡಿದರು.
ಎನ್ ಡಿಆರ್ ಎಫ್ ತಂಡಗಳು ಇದೇ ವೇಳೆ ಹಾನಿಯ ಪ್ರಮಾಣವನ್ನೂ ಲೆಕ್ಕ ಹಾಕಲಿವೆ. ತಂಡಗಳು ಜಿವ ರಕ್ಷಕ ಕಿಟ್ ಗಳು ಹಾಗೂ ಕಟ್ಟಿಗೆ ಮತ್ತು ಕಬ್ಬಿಣ ಕತ್ತರಿಸುವ ಅತ್ಯಾಧುನಿಕ ಉಪಕರಣಗೊಂದಿಗೆ ತೆರಳಿವೆ ಎಂದು ಅವರು ವಿವರಿಸಿದರು.