ದೇವನಹಳ್ಳಿ ತಾಲ್ಲೂಕಿನಲ್ಲಿ ತಹಶೀಲ್ದಾರರು ನೂರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು, ನಕಲಿ ದಾಖಲೆ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರವೇ ಹಾಗೆ. ಆಕ್ಟೋಪಸ್ ತರಹ, ತನ್ನ ಹಿಡಿತಕ್ಕೆ ಸಿಕ್ಕಿದ್ದನ್ನು ಕಬಳಿಸುತ್ತದೆ.
ಅಧಿಕಾರವನ್ನು ಕೆಲವರು ಒಳ್ಳೆಯದಕ್ಕೆ ಬಳಸಿದರೆ, ಕೆಲವರು ಕೆಟ್ಟದ್ದಕ್ಕೂ ಬಳಸುತ್ತಾರೆ. ಪೋಡಿ ಪ್ರಕರಣವನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂಬ ಸರ್ಕಾರದ ಸೂಚನೆಯನ್ನು ನೆಪವಾಗಿಟ್ಟು ಕೊಂಡು, ಅಧಿಕಾರಿಗಳು ಇಂಥ ಅಕ್ರಮ ಗಳನ್ನು ಎಸಗುತ್ತಾರೆ. ಇಂಥ ಅಕ್ರಮಗಳಿಗೆ ಸರ್ಕಾರದ ಆತುರ (ಅವಿವೇಕ)ವೂ ಕಾರಣ.
ಇನ್ನು ಮುಂದೆ ಪೋಡಿ ಪ್ರಕರಣಗಳನ್ನು ಮಂಜೂರು ಮಾಡಲು, ತಹಶೀಲ್ದಾರ ಒಬ್ಬರಿಗೇ ಅಧಿಕಾರ ಕೊಡಬಾರದು. ಅವರು ಪ್ರಕರಣಗಳನ್ನು ಅಸಿಸ್ಟಂಟ್ ಕಮಿಷನರ್ ಕಚೇರಿಗೆ, ಅಂತಿಮ ಮಂಜೂರಾತಿಗಾಗಿ, ಶಿಫಾರಸು ಮಾಡಿ ಸಲ್ಲಿಸುವಂತಾಗಬೇಕು. ಬಳಿಕ ಅಸಿಸ್ಟಂಟ್ ಕಮಿಷನರ್ ಖುದ್ದು ಸ್ಥಳಪರಿಶೀಲನೆ ಮಾಡಿ, ಅಂತಿಮ ಮಂಜೂರಾತಿ ನೀಡುವಂತಾಗಬೇಕು.
ಅಧಿಕಾರ ವಿಕೇಂದ್ರೀಕರಣವಾಗಬೇಕು. ಅಲ್ಲದೆ, ಅಕ್ರಮವೆಂದು ಕಂಡುಬಂದಲ್ಲಿ, ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂಥ ಮುಂಜಾಗ್ರತಾ ಕ್ರಮಗಳಿಂದ, ಭೂಕಬಳಿಕೆಗಳನ್ನು ತಡೆಗಟ್ಟಬಹುದು.
– ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ