ನವದೆಹಲಿ (ಪಿಟಿಐ): ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನಡೆಸುವ ವಿಷಯದಲ್ಲಿ ಮತದಾರ ಈ ಚುನಾವಣೆಯಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾನೆ ಎಂದು ಹಲವು ಉದ್ಯಮಪತಿಗಳು ಅಭಿಪ್ರಾಯಪಟ್ಟಿದ್ದಾರೆ.
‘ಭ್ರಷ್ಟಾಚಾರ ತಡೆಗಟ್ಟಿ ರಾಜಕೀಯ ನಾಯಕತ್ವ ಗಟ್ಟಿಗೊಳಿಸುವಲ್ಲಿ ವಿಫಲವಾದ ಕಾಂಗ್ರೆಸ್ಗೆ ಮತದಾರ ಪಾಠ ಕಲಿಸಿದ್ದಾನೆ’ ಎಂದು ಕಿರಣ್ ಮುಜುಮ್ದಾರ್ ಷಾ ಹೇಳಿದ್ದಾರೆ.
‘ಭ್ರಷ್ಟಚಾರದ ವಿರುದ್ಧ ಸಂಘರ್ಷಕ್ಕೆ ಇಳಿದ ಆಮ್ ಆದ್ಮಿ ಪಾರ್ಟಿಗೆ ದೆಹಲಿಯ ಮತದಾರರು ಮಣೆ ಹಾಕಿದ್ದಾರೆ. ಭ್ರಷ್ಟಾಚಾರದಿಂದ ಕೂಡಿದ ಆಡಳಿತ ವ್ಯವಸ್ಥೆಯನ್ನು ಕಿತ್ತೆಸೆಯಲು ಜನ ಕಾಯುತ್ತಿದ್ದರು. ಪಾರದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತ ಜನರಿಗೆ ಬೇಕಾಗಿದೆ’ ಎಂದು ಷಾ ಟ್ವೀಟ್ ಮಾಡಿದ್ದಾರೆ.
ವಾಣಿಜ್ಯೋದ್ಯಮ ಮಹಾಸಂಘ ‘ಅಸೋಚಾಂ’ ಅಭಿಪ್ರಾಯಪಟ್ಟಂತೆ, ‘ಈ ಫಲಿತಾಂಶಗಳು ಆಯಾ ರಾಜ್ಯ ಸರ್ಕಾರಗಳು ತೋರಿದ ಆಡಳಿತ ವೈಫಲ್ಯವನ್ನು ಸ್ಪಷ್ಟವಾಗಿ ಹೇಳುತ್ತವೆ’ ಎಂದಿದೆ.
‘ಈ ಬಾರಿಯ ಚುನಾವಣೆಯಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರುವ ಜಾತಿ ಹಾಗೂ ಧರ್ಮದ ಅಂಶಗಳಿಗೆ ಮತದಾರರು ಅಷ್ಟಾಗಿ ಗಮನಕೊಡದೆ ಉತ್ತಮ ಆಡಳಿತಕ್ಕೆ ಆದ್ಯತೆ ನೀಡಿದ್ದಾರೆ. ಬೆಲೆ ಏರಿಕೆ ವಿಷಯವೂ ಈ ಚುನಾವಣೆಯಲ್ಲಿ ಮತದಾರರ ಮೇಲೆ ಗಾಢ ಪರಿಣಾಮ ಬೀರಿದೆ’ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ತಿಳಿಸಿದ್ದಾರೆ.
‘ತರಕಾರಿ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಜನ ಆಕ್ರೋಶ ಗೊಂಡಿದ್ದು, ಇದು ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ’ ಎಂದು ಪಿಎಚ್ಡಿ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸೌರಭ ಸನ್ಯಾಲ್ ಹೇಳಿದರು.
‘ಮತದಾರರಿಗೆ ಪರ್ಯಾಯ ಮಾರ್ಗವೇ ಇರಲಿಲ್ಲ. ಹಾಗಾಗಿ ಎಎಪಿ ಈ ಚುನಾವಣೆಯಲ್ಲಿ ತನ್ನ ಶಕ್ತಿ ತೋರಿಸಿದೆ’ ಎಂದು ಬ್ಯಾಂಕ್ ಉದ್ಯೋಗಿ ಮೀರಾ ಸನ್ಯಾಲ್ ಹೇಳಿದರು.