ಹೈದರಾಬಾದ್ (ಐಎಎನ್ಎಸ್): ಇಲ್ಲಿನ ‘ಕೇರ್’ ಆಸ್ಪತ್ರೆ ವೈದ್ಯರು ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ದೇಶದಲ್ಲೇ ಇದು ಇಂತಹ ಪ್ರಥಮ ಪ್ರಯತ್ನ ಎನ್ನಲಾಗಿದೆ. 27 ವಾರ ತುಂಬಿದ್ದ ಭ್ರೂಣದ ಹೃದಯದ ಕವಾಟದಲ್ಲಿರುವ ದೋಷವನ್ನು ಈ ಮೂಲಕ ಸರಿಪಡಿಸಲಾಗಿದೆ.
25 ವರ್ಷದ ಸಿರಿಷಾ ಎಂಬ ಮಹಿಳೆಯ ಗರ್ಭದಲ್ಲಿರುವ ಮಗುವಿನ ಮೇಲೆ ಈ ಚಿಕಿತ್ಸೆ ನಡೆಸಲಾಗಿದೆ. ಮಕ್ಕಳ ಹೃದ್ರೋಗದಲ್ಲಿ ತಜ್ಞರಾಗಿರುವ ಕೆ. ನಾಗೇಶ್ವರ ರಾವ್ ನೇತೃತ್ವದ ಎಂಟು ವೈದ್ಯರ ತಂಡ ಎರಡೂವರೆ ಗಂಟೆಗಳ ಕಾಲ ಈ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿತು.
ಇದರಿಂದಾಗಿ ಮಗು ಆರೋಗ್ಯವಂತವಾಗಿ ಬೆಳೆಯಲಿದೆ. ಅಗತ್ಯ ಬಿದ್ದಲ್ಲಿ ಮಗು ಜನಿಸಿದ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.