ಮಹದೇವಪುರ: ಕೃಷ್ಣರಾಜಪುರ ಹಾಗೂ ಮಹದೇವಪುರ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಗ್ರಹಗೊಳ್ಳುವ ಕಸವನ್ನು ಸದ್ದಿಲ್ಲದೆ ಮಂಡೂರು ಗ್ರಾಮದ ತ್ಯಾಜ್ಯ ಘಟಕದ ಸುತ್ತಲಿನ ಪ್ರದೇಶದಲ್ಲಿ ತಂದು ಸುರಿಯಲಾಗುತ್ತಿದೆ. ಹೆಚ್ಚು ಜನಸಂಚಾರವಿಲ್ಲದ ರಸ್ತೆಗಳಲ್ಲಿ ಸಹ ಕಸದ ರಾಶಿ ಬಿದ್ದಿದೆ. ಈ ಬೆಳವಣಿಗೆಯಿಂದ ಮಂಡೂರಿನ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಮಂಡೂರಿನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸಾಗಿಸುವುದನ್ನು ಬಿಬಿಎಂಪಿ ಶುಕ್ರವಾರದಿಂದ ಸ್ಥಗಿತಗೊಳಿಸಿತ್ತು. ಆದರೆ, ಈಗ ಮತ್ತೆ ಕಸದ ಸಮಸ್ಯೆ ಶುರುವಾಗಿದೆ.
ಅವಲಹಳ್ಳಿ, ಬೂದಿಗೆರೆ ಕ್ರಾಸ್, ಕೊನಸದಾಸಪುರ, ಮೇಡಹಳ್ಳಿ, ಬೈಯಪ್ಪನಹಳ್ಳಿ, ರಾಂಪುರ, ಭೈರತಿ ಗ್ರಾಮದ ರಸ್ತೆಗಳ ಅಕ್ಕಪಕ್ಕದಲ್ಲಿ ಲಾರಿಗಳು ಕತ್ತಲಾಗುತ್ತಿದ್ದಂತೆ ಕಸವನ್ನು ಸುರಿದು ಹೋಗಿವೆ. ಆದೂರು ಮತ್ತು ರಾಂಪುರ ಗ್ರಾಮಗಳ ಮಧ್ಯದಲ್ಲಿನ ರಸ್ತೆಯ ಬದಿಯಲ್ಲಿ ಹೇರಳವಾಗಿ ಕಸ ಬಿದ್ದಿದೆ.
ಹೀಗಾಗಿ ಕಸ ಮತ್ತೆ ಸ್ಥಳೀಯರನ್ನು ಕೆರಳಿಸಿದೆ. ಘಟಕ-ದೊಳಗೆ ಸಂಗ್ರಹಣೆಗೊಂಡಿರುವ ಕಸವನ್ನು ಸಂಸ್ಕರಣೆ ಮಾಡುವ ಮೊದಲು ಘಟಕದ ಹೊರವಲಯದಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟಕದೊಳಗೆ ಕಸವನ್ನು ಸುರಿಯುವುದನ್ನು ನಿಲ್ಲಿಸಿದಂತೆ ಊರಿನ ಸುತ್ತಮುತ್ತ ರಾತ್ರಿ ವೇಳೆ ಸ್ಥಳೀಯ ಕಸದ ಲಾರಿಗಳು ಕಸವನ್ನು ಸುರಿಯುವುದಕ್ಕೆ ಕಡಿವಾಣ ಹಾಕಬೇಕು. ಒಂದುವೇಳೆ ಅಕ್ರಮವಾಗಿ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಕಸವನ್ನು ಸುರಿದರೆ ಮತ್ತೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿರುವ ಗ್ರಾಮಸ್ಥರು, ಈ ಬಗ್ಗೆ ಬಿಬಿಎಂಪಿ ಆಯುಕ್ತರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಘಟಕದಲ್ಲಿ ಸಂಗ್ರಹಗೊಂಡ ಕಸದಿಂದ ದುರ್ನಾತ ಹೊರಬರುತ್ತಲೇ ಇದೆ. ಆದಷ್ಟು ತ್ವರಿತಗತಿಯಲ್ಲಿ ಕಸವನ್ನು ಸಂಸ್ಕರಣೆ ಮಾಡಬೇಕು. ದುರ್ನಾತ ಹೆಚ್ಚಾಗದಂತೆ ಅಗತ್ಯವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬೆಳವಣಿಗೆ ನೋಡಿದರೆ ಮಂಡೂರಿಗೆ ಕಸದಿಂದ ಮುಕ್ತಿ ಸಿಗುವುದು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ ಎಂದು ಸ್ಥಳೀಯ ಮುನಿಕೃಷ್ಣ ಎಂಬುವವರು ಆತಂಕ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.