ಮೊಬೈಲ್ ಕೆಟ್ಟದ್ದು ಎಂದು ನಾವು ಹೇಳಿಲ್ಲ. ನಾವು ಹೇಳಿರುವುದು ಎಳೆಯ ಮಗುವಿಗೆ, ವ್ಯಾಸಂಗದ ಅವಧಿಯಲ್ಲಿ ಮೊಬೈಲ್ ಬೇಡ ಎಂದು ಮಾತ್ರ...
ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ತನ್ನ 27ನೇ ವರದಿಯನ್ನು ಇತ್ತೀಚೆಗೆ ಸದನದಲ್ಲಿ ಮಂಡಿಸಿದೆ. ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಎದುರಿಸುತ್ತಿರುವ ವಿವಿಧ ಸ್ವರೂಪದ ಸಮಸ್ಯೆಗಳ ಕುರಿತು ಸಮಿತಿ ನಡೆಸಿದ ಅಧ್ಯಯನ ಈ ವರದಿಯಲ್ಲಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಯುವತಿಯರ ನಾಪತ್ತೆ ಪ್ರಕರಣಗಳೂ ಸಮಿತಿಯ ಅಧ್ಯಯನದ ವಸ್ತುವಾಗಿದ್ದವು.
ಸಮಿತಿಯು 272 ಪುಟಗಳ ವರದಿಯಲ್ಲಿ ಮಾಡಿರುವ ಒಂದು ಶಿಫಾರಸು ಈಗ ಪರ–ವಿರೋಧ ಚರ್ಚೆಗಳ ಕೇಂದ್ರ ಬಿಂದುವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಯುವತಿಯರ ನಾಪತ್ತೆ ಪ್ರಕರಣಗಳ ತಡೆಗೆ ಸಮಿತಿ ಐದು ಶಿಫಾರಸುಗಳನ್ನು ನೀಡಿದೆ. ಐದನೆಯ ಶಿಫಾರಸು ಹೀಗಿದೆ: ‘ಸರ್ಕಾರ ಶಿಕ್ಷಣ ಇಲಾಖೆಗೆ ಕೂಡಲೇ ಸೂಚನೆ ನೀಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು’.
ಶಿಫಾರಸಿನಲ್ಲಿ ‘ವಿದ್ಯಾರ್ಥಿ’ ಎಂಬ ಪದ ಬಳಸಲಾಗಿದೆ. ಅಂದರೆ ಇದು ಬಾಲಕ–ಬಾಲಕಿಯರಿಬ್ಬರಿಗೂ ಸಮಾನವಾಗಿ ಅನ್ವಯ ಆಗುತ್ತದೆ. ‘ಶಾಲಾ ಕಾಲೇಜುಗಳಲ್ಲಿ’ ಎಂಬ ಸ್ಪಷ್ಟನೆ ಇರುವ ಕಾರಣ, ಒಂದನೆಯ ತರಗತಿಯಿಂದ ಆರಂಭಿಸಿ, ಕಾಲೇಜು ಶಿಕ್ಷಣದ ಕೊನೆಯ ಹಂತದವರೆಗೂ ಶಾಲಾ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ತಡೆಯಬೇಕು ಎಂಬ ಆಶಯ ಶಿಫಾರಸಿನಲ್ಲಿದೆ.
ಅತ್ಯಾಚಾರದಂಥ ವಿಕೃತ ಕ್ರೌರ್ಯದ ತಡೆಗೆ, ನಾಪತ್ತೆ ಪ್ರಕರಣಗಳನ್ನು ಇಲ್ಲವಾಗಿಸಲು ಮೊಬೈಲ್ ಬಳಕೆ ನಿಷೇಧಿಸುವುದು ಪರಿಹಾರವೇ? ಇಂಥ ಶಿಫಾರಸು ಮಾಡುವಾಗ ಸಮಿತಿ ಯಾವ ಅಂಶಗಳನ್ನು ಪರಿಗಣಿಸಿದೆ? ಈ ಕುರಿತು ಸಮಿತಿ ಅಧ್ಯಕ್ಷೆ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:
*ಮೊಬೈಲ್ ಬಳಕೆ ನಿಷೇಧಿಸಬೇಕು ಎಂಬ ಶಿಫಾರಸು ಮಾಡಲು ಕಾರಣ ಏನು?
ನಮ್ಮದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ. ನಾವು ಮಹಿಳೆ ಮತ್ತು ಮಕ್ಕಳ ಕ್ಷೇಮವನ್ನು ಗಮನ ದಲ್ಲಿ ಇರಿಸಿಕೊಂಡಿದ್ದೆವು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ, ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಐದರಿಂದ ಆರು ಸಾವಿರದಷ್ಟು ಮಹಿಳೆ/ ಯುವತಿಯರ ಅಪಹರಣ ಮತ್ತು ನಾಪತ್ತೆ ಪ್ರಕರಣಗಳು ನಡೆದಿವೆ ಎಂಬ ಅಂಶ ಗೊತ್ತಾಯಿತು.
ಇದರಲ್ಲಿ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗಿದ್ದವು. ಈ ಕುರಿತು ಸಮಿತಿ ಮಂಥನ ನಡೆಸಿತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಪಹರಣ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುವ ಸಂದರ್ಭದಲ್ಲಿ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಯನ್ನೂ ನಾವು ಅಧಿಕಾರಿಗಳ ಮುಂದಿಟ್ಟೆವು. ನಾಪತ್ತೆಯಾದವರಲ್ಲಿ ಹೆಚ್ಚಿನವರು ಮೊಬೈಲ್ ಬಳಸುವ ಸಂದರ್ಭದಲ್ಲಿ, ಅಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ, ಅವರ ಜೊತೆ ಹೋಗಿ ದೌರ್ಜನ್ಯಕ್ಕೆ ಒಳಗಾಗಿದ್ದರು. ಅವರು ಮನೆಗೆ ವಾಪಸ್ ಬಂದು ತಂದೆ–ತಾಯಿಗೆ ವಿಚಾರ ತಿಳಿದ ನಂತರ, ‘ಅಪಹರಣ ಮತ್ತು ಅತ್ಯಾಚಾರ’ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅದು ನಿಜ ಅರ್ಥದಲ್ಲಿ ಅಪಹರಣ ಅಲ್ಲ.
* ಈ ಕುರಿತು ಸ್ವಲ್ಪ ವಿವರಣೆ ನೀಡುತ್ತೀರಾ? ಮೊಬೈಲ್ನಿಂದಾಗಿ ಕೆಟ್ಟ ಘಟನೆ ನಡೆದಿದೆಯೇ?
ಒಂದು ಉದಾಹರಣೆಯನ್ನು ನಾನು ನೀಡುತ್ತೇನೆ. ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಯೊಬ್ಬಳು ತಾಯಿಯ ಮೊಬೈಲ್ಗೆ ಬಂದ ದೂರವಾಣಿ ಕರೆ ಆಧರಿಸಿ, ಆ ಸಂಖ್ಯೆಗೆ ತಾನು ಕರೆ ಮಾಡಿದಳು. ಅತ್ತ ಕಡೆ ಯಾವುದೋ ವ್ಯಕ್ತಿ ಕರೆ ಸ್ವೀಕರಿಸಿ ಮಾತನಾಡಿದ, ಬಾಲಕಿಗೂ ಖುಷಿ ಯಾಯಿತು. ಆಕೆ ಬಾಲಕಿ, ಹೆಚ್ಚಿನ ತಿಳಿವಳಿಕೆ ಇರಲಿಲ್ಲ.
ನಂತರ ಆ ಬಾಲಕಿ ತನ್ನ ಮೊಬೈಲ್ನಿಂದ ಆ ಸಂಖ್ಯೆಗೆ ಕರೆ ಮಾಡಲು ಆರಂಭಿಸಿದಳು. ಹಾಗೇ ಸ್ನೇಹ ಬೆಳೆಯಿತು. ಆ ವ್ಯಕ್ತಿ, ‘ನೀನು ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ, ಹೊರಗಡೆ ಬಾ’ ಎಂದು ಪುಸಲಾಯಿಸಿದ. ಬಾಲಕಿಯ ಮನೆಯ ಸನಿಹಕ್ಕೇ ಬಂದು ಆಕೆಯನ್ನು ಕಾರಿನಲ್ಲಿ ಕರೆದೊಯ್ದ. ಆಕೆ ಮೂರು ದಿನ ಬೇರೊಂದು ಜಿಲ್ಲೆಯಲ್ಲಿ ಆ ವ್ಯಕ್ತಿಯ ಜೊತೆ ಇದ್ದು ಮನೆಗೆ ವಾಪಸಾದಳು. ಆ ವ್ಯಕ್ತಿ ಬಾಲಕಿಯನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡ. ಇದು ಒಂದು ನಿದರ್ಶನ ಮಾತ್ರ, ನಾನೇ ಖುದ್ದಾಗ ಅರಿತ ವಿಚಾರ.
*ಆದರೆ ಇದಕ್ಕೆ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನೇ ನಿಷೇಧಿ ಸಬೇಕೇ?
ಚಿಕ್ಕ ವಯಸ್ಸಿನಲ್ಲಿ ಮೊಬೈಲ್ ದೂರವಾಣಿಯನ್ನು ಕಿವಿಗೆ ಒತ್ತಿ ಹಿಡಿದು ಮಾತನಾಡುತ್ತ ಕೂರುವುದು ಆರೋ ಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅಲ್ಲದೆ, ಮೊಬೈಲ್ನಲ್ಲಿ ಹರಿದಾಡುವ ಚಿತ್ರ–ವಿಚಿತ್ರ ದೃಶ್ಯಗಳನ್ನು ನೋಡು ವುದು ಸಣ್ಣ ವಯಸ್ಸಿನ ಮಕ್ಕಳಿಗೆ ಒಳ್ಳೆ ಯದಲ್ಲ. ಅವರು ಓದಿನ ಕಡೆ ಗಮನ ಕೊಡಲಿ, ನಂತರ ತಂತ್ರಜ್ಞಾನದ ಲಾಭ ಪಡೆದುಕೊಳ್ಳಲಿ. ಮೊಬೈಲ್ ಬಳಕೆಗಿಂತ ಮೊದಲು ಗ್ರಂಥಾಲಯಗಳನ್ನು ಎಡ ತಾಕಲಿ, ಸಾಹಿತಿಗಳ ಕೃತಿ ಓದಿಕೊಳ್ಳಲಿ. ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಲಿ. ಮೊಬೈಲ್ನಲ್ಲಿ ದೊರೆಯುವ ಅಶ್ಲೀಲ ವಿಚಾರಗಳನ್ನು ನೋಡಿ ಮನಸ್ಸು ಕೆಡಿಸಿಕೊಳ್ಳುವುದು ಬೇಡ.
*ಎಲ್ಲ ಹಂತದ ವಿದ್ಯಾರ್ಥಿಗಳಿಗೂ ಮೊಬೈಲ್ ಬಳಕೆ ನಿಷೇಧಿಸಬೇಕೇ?
ಹದಿಹರೆಯದ ವಿದ್ಯಾರ್ಥಿಗಳು ಶಾಲೆಯಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಬೇಕು ಎಂಬುದು ನಮ್ಮ ಆಶಯ. ನಾವು ವರದಿ ಸಲ್ಲಿಸಿದ ನಂತರ, ನಮ್ಮ ಶಿಫಾರಸು ರಾಷ್ಟ್ರೀಯ ಸುದ್ದಿಯಾಗಿದೆ. ಆದರೆ ಒಂದು ಸಂತಸದ ಸಂಗತಿಯೆಂದರೆ, ಸಾವಿರಾರು ಮಂದಿ ಹೆತ್ತವರು ನನಗೆ ಕರೆ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದು, ವಿದ್ಯಾರ್ಥಿಗಳಿಗೆ ಮೊಬೈಲ್ ಬೇಕೇ, ಬೇಡವೇ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿತು. ಶೇಕಡ 87ರಷ್ಟು ಜನರು ವಿದ್ಯಾರ್ಥಿಗಳಿಗೆ ಮೊಬೈಲ್ ಬೇಡ ಎಂಬ ಅಭಿಪ್ರಾಯ ನೀಡಿದರು.
ನಮ್ಮ ವರದಿಯಲ್ಲಿ, ಮೊಬೈಲ್ ಬಳಕೆಗೆ ಸಂಬಂಧಿಸಿದ ವಿಚಾರವಷ್ಟೇ ಇಲ್ಲ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಒಟ್ಟು ಐದು ಶಿಫಾರಸುಗಳನ್ನು ನೀಡಿದ್ದೇವೆ. ಪೊಲೀಸರು ಹೆಣ್ಣುಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬ ಶಿಫಾರಸೂ ಇದೆ.
* ಶಾಲೆಗೆ ಹೋಗುವ ಮಕ್ಕಳಿಗೆ ಮೊಬೈಲ್ ಕೊಡಿಸುವುದರಿಂದ ಮಕ್ಕಳು ಏನು ಮಾಡುತ್ತಿವೆ ಎಂಬುದನ್ನು ಯಾವಾಗ ಬೇಕಿದ್ದರೂ ವಿಚಾರಿಸುವ ಅವಕಾಶ ಪಾಲಕರಿಗೆ ದೊರೆಯುತ್ತದೆ, ಅಲ್ಲವೆ?
ಪಾಲಕರಿಗೆ ಮೊಬೈಲ್ ಖರೀದಿಸಿ ಮಕ್ಕಳಿಗೆ ನೀಡುವ ತಾಕತ್ತು ಇದೆ ಎಂದಾದರೆ, ಮಗುವನ್ನು ಶಾಲಾ ವಾಹ ನದಲ್ಲೇ ಕಳುಹಿಸುವ ಸಾಮರ್ಥ್ಯವೂ ಇರುತ್ತದೆ. ನೀವು ಹೇಳುವ ವಾದವನ್ನು ನಾನು ತುಸು ಮಟ್ಟಿಗೆ ಗ್ರಾಮಾಂತರ ಪ್ರದೇಶದ ಪಾಲಕರ ವಿಚಾರದಲ್ಲಿ ಒಪ್ಪುವೆ.
ಕುಂದಾಪುರ ತಾಲ್ಲೂಕಿನ ಬೈಂದೂರಿನಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ಮೊನ್ನೆ ಅತ್ಯಾಚಾರ ನಡೆಯಿತು, ಕೊಲೆ ಯೂ ಆಯಿತು. ಪುತ್ತೂರಿನಲ್ಲಿ ಹಿಂದೆ ನಡೆದ ಸೌಮ್ಯಾ ಭಟ್ ಪ್ರಕರಣವೂ ಒಂದು ಉದಾಹರಣೆ. ಹಳ್ಳಿಗಳಲ್ಲಿ ನೆಟ್ವರ್ಕ್ ಇಲ್ಲದ ಪ್ರದೇಶಗಳೇ ಹೆಚ್ಚು, ಹಾಗಾಗಿ ಮೊಬೈಲ್ ಏಕೆ ಎಂಬ ಮಾತೂ ಇದೆ.
ಪೇಟೆಗಳಲ್ಲಿನ ಪಾಲಕರು ಬಡವರಿರಲಿ ಶ್ರೀಮಂತರಿರಲಿ ರಿಕ್ಷಾ ಅಥವಾ ಬಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಹೀಗಿರುವಾಗ ಮೊಬೈಲ್ ಏಕೆ ಬೇಕು? ಶಾಲೆಯಲ್ಲೇನೋ ಅನಾಹುತ ಸಂಭವಿಸಿದರೆ, ಅಲ್ಲಿ ಶಿಕ್ಷಕರು ಪಾಲಕರಿಗೆ ವಿಚಾರ ತಿಳಿಸಬೇಕು. ಮಗುವಿಗೆ ಮೊಬೈಲ್ ಫೋನನ್ನು ಭದ್ರತೆಗೆ ಎಂದು ಕೊಡಿಸಿದರೂ, ಮಗು ಅದನ್ನು ಆಟಕ್ಕೇ ಬಳಸುತ್ತದೆ. ಮಕ್ಕಳ ಮನಸ್ಸೇ ಹಾಗೆ.
* ಮೊಬೈಲ್ ಬಳಕೆ ನಿಷೇಧಿಸಬೇಕು ಎಂಬ ಶಿಫಾರಸು ಮಾಡುವಾಗ ಇನ್ನೂ ಯಾವ ಸಂಗತಿಯನ್ನು ಸಮಿತಿ ಪರಿಗಣಿಸಿತ್ತು?
ಮೊಬೈಲ್ ನಿಷೇಧಿಸಬೇಕು ಎಂಬ ಶಿಫಾರಸು ಮಾಡುವಾಗ ಅತ್ಯಾಚಾರವನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡಿರಲಿಲ್ಲ. ಮಕ್ಕಳ ಸಮಗ್ರ ಭವಿಷ್ಯದ ದೃಷ್ಟಿಯಿಂದ ಈ ಶಿಫಾರಸು ಮಾಡಲಾಗಿದೆ. ಮೊಬೈಲ್ನ ಒಳಿತು – ಕೆಡುಕುಗಳು ಮಗುವಿಗೆ ತಿಳಿಯಲಿ. ನಂತರ ಮೊಬೈಲ್ ಬಳಸಲಿ. ಅಸಭ್ಯ ದೃಶ್ಯಗಳನ್ನು ಎಳವೆಯಲ್ಲೇ ನೋಡಿದರೆ ಆ ಮಗುವಿನ ಭವಿಷ್ಯ ಏನಾಗಬಹುದು? ಸತ್ಯಹರಿಶ್ಚಂದ್ರ ನಾಟಕ ನೋಡಿದ ಮೋಹನದಾಸ್ ಕರಮಚಂದ್ ಗಾಂಧಿ ಮುಂದೆ ಮಹಾತ್ಮ ಗಾಂಧಿಯಾದರು. ಮಗು ಯಾವುದೋ ಕೆಟ್ಟ ಹೊತ್ತಿನಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದರೆ...?
* ಮೊಬೈಲ್ ಬಳಕೆ ಕೆಟ್ಟದ್ದು ಎಂಬ ನಿಲುವು ನಿಮ್ಮದಾ?
ಇಂದು ಗುಜರಿ ಕೆಲಸದವರೂ ಮೊಬೈಲ್ ಹೊಂದಿದ್ದಾರೆ. ಮೊಬೈಲ್ ಕೆಟ್ಟದ್ದು ಎಂದು ನಾವು ಹೇಳಿಲ್ಲ. ನಾವು ಹೇಳಿರುವುದು ಎಳೆಯ ಮಗುವಿಗೆ, ವ್ಯಾಸಂಗದ ಅವಧಿಯಲ್ಲಿ ಮೊಬೈಲ್ ಬೇಡ ಎಂದು ಮಾತ್ರ. ಮೊನ್ನೆ ಒಬ್ಬರ ಜೊತೆ ಮಾತನಾಡುವಾಗ ಹೇಳಿದರು, ‘ಅಮ್ಮಾ ಬೇಗ ಬಾ, ಟಿ.ವಿಯಲ್ಲಿ ರೇಪ್ ನಡೀತಾ ಇದೆ’ ಎಂದು ಒಂದು ಮಗು ಹೇಳಿತಂತೆ. ಮಗುವಿಗೆ ‘ರೇಪ್’ ಎನ್ನುವುದು ಹೇಗೆ ತಿಳಿಯಿತು? ಮಕ್ಕಳು ಹಾದಿ ತಪ್ಪಬಾರದಲ್ಲ? ತಂತ್ರಜ್ಞಾನ ಬೇಕು. ಆದರೆ ಅದನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.