ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ದೇವರಲ್ಲಿ ನಿವೇದಿಸಿದ ಪ್ರಾರ್ಥನೆಯ ಬಗ್ಗೆ ಮೂಲೆಮನೆ ರತ್ನಾಕರ ಭಿಡೆಯವರ ಅನಿಸಿಕೆ (ವಾ.ವಾ., ನ.14) ಸೂಕ್ತವಾಗಿದೆ.
‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಕೊಡು’ ಎಂಬ ಮಹಾತ್ಮ ಗಾಂಧೀಜಿಯವರ ಹಿತನುಡಿಯನ್ನು ಮಂತ್ರಿಗಳು ಮರೆತು, ‘ತಮ್ಮ ಮೇಲೆ ಆಪಾದನೆ ಹೊರಿಸಿದವರಿಗೆ ದೇವರು ತಕ್ಕ ಶಿಕ್ಷೆ ಕೊಡಲಿ’ ಎಂದು ಪ್ರಾರ್ಥಿಸಿರುವುದು ಅಪ್ರಬುದ್ಧ ನಡೆ. ಸೇಡನ್ನು ಸೇಡಿನಿಂದಲೇ ತೀರಿಸುವ ಹುನ್ನಾರ. ತಮ್ಮ ಖಾತೆಗೆ ಕಳಂಕ ತರುವ ಮಾತು. ಇದು ವಿದ್ಯಾರ್ಥಿಗಳಲ್ಲಿ ಮೌಢ್ಯವನ್ನು ಬಿತ್ತುವಂತಹ ಕ್ರಮವಾಗಿದೆ. ಇದರ ಬದಲು, ‘ನನ್ನ ಮೇಲೆ ಆರೋಪ ಹೊರಿಸಿದವರಿಗೆ ಸರಿಯಾದ ಬುದ್ಧಿ ಕೊಡು, ದೇವರೇ’ ಎಂದು ಪ್ರಾರ್ಥಿಸಿದ್ದರೆ ಮಂತ್ರಿಗಳ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ಮೂಡುತ್ತಿತ್ತು.
ದೇವಸ್ಥಾನಕ್ಕೆ ಹೋಗಿ ತನ್ನದೇನೂ ತಪ್ಪಿಲ್ಲವೆಂದು ಪ್ರಮಾಣ ಮಾಡಿದ್ದರಲ್ಲಿ ತಪ್ಪಿಲ್ಲ. ಆದರೆ, ಶಿಕ್ಷಣ ಮಂತ್ರಿಗಳು ಬೇಡಿಕೊಂಡ ರೀತಿಯನ್ನು ಮಾತ್ರ ಯಾವ ವಿದ್ಯಾರ್ಥಿಯೂ ಅನುಸರಿಸದೇ ಇರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.