ನವದೆಹಲಿ: ರಾಜ್ಯದಲ್ಲಿ ನಾಪತ್ತೆಯಾಗಿರುವ 1236 ಮಕ್ಕಳನ್ನು ಆರು ವಾರಗಳ ಒಳಗೆ ಪತ್ತೆ ಹಚ್ಚುವಂತೆ ಸುಪ್ರೀಂಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರಕ್ಕೆ ಗಡುವು ನೀಡಿತು.
ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸ್ವಯಂಸೇವಾ ಸಂಸ್ಥೆ ‘ಬಚಪನ್ ಬಚಾವೋ ಆಂದೋಲನ್’, ದೇಶದ ವಿವಿಧೆಡೆ ನಾಪತ್ತೆಯಾಗಿರುವ ಮಕ್ಕಳನ್ನು ಹುಡುಕಿಕೊಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
‘ಕೋರ್ಟ್ ನೀಡಿದ ಗಡುವಿನ ಒಳಗಾಗಿ ಎಷ್ಟು ಮಕ್ಕಳನ್ನು ಹುಡುಕಿದ್ದೀರಿ ಎಂದು ಆರು ವಾರಗಳ ನಂತರ ನಮಗೆ ತಿಳಿಸಿ’ ಎಂದು ನ್ಯಾಯಮೂರ್ತಿಗಳು, ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಬಸವಪ್ರಭು ಪಾಟೀಲ ಅವರಿಗೆ ಸೂಚಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹಾಗೂ ಡಿಜಿಪಿ ಲಾಲ್ರೋಕುಮ್ ಪಚಾವೊ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿದ್ದರು.