ಬೆಂಗಳೂರು: ರಾಜಧಾನಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ನಗರ ಯೋಜನಾ ತಜ್ಞ ವಿ.ರವಿಚಂದರ್ ಅವರು ಆನ್ಲೈನ್ ಅಭಿಯಾನ ಆರಂಭಿಸಿದ್ದಾರೆ.
ಮಕ್ಕಳ ಸುರಕ್ಷತೆ ಕುರಿತು ನಗರದ ಶಾಲೆಗಳ ಆಡಳಿತ ಮಂಡಳಿ, ಪೋಷಕರು ಹಾಗೂ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವರು ನವೆಂಬರ್ 17ರಂದು ‘ನಮ್ಮ ಮಕ್ಕಳ ಸುರಕ್ಷತೆ (www.nmsbengaluru.org)’ ವೇದಿಕೆ ಶುರು ಮಾಡಿದ್ದಾರೆ. ಈ ವೆಬ್ಸೈಟ್ನಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ 20ಕ್ಕೂ ಅಧಿಕ ಲೇಖನಗಳು ಇವೆ.
ರಾಜಾಜಿನಗರ, ಕೋರಮಂಗಲ, ಇಂದಿರಾನಗರ ಹಾಗೂ ಎಚ್ಎಸ್ಆರ್ ಬಡಾವಣೆಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಯಾಣ ನಗರದ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಹೆಣ್ಣೂರು–ಬಾಗಲೂರು ರಸ್ತೆಯ ಬೆಂಗಳೂರು ಇಂಟರ್ನ್ಯಾಷನಲ್ ಸ್ಕೂಲ್, ಯಲಹಂಕದ ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್, ಬನ್ನೇರುಘಟ್ಟ ರಸ್ತೆಯ ಸಂಹಿತಾ ಅಕಾಡೆಮಿ ಸೇರಿದಂತೆ 17 ಶಾಲೆಗಳು ಅಭಿಯಾನದಲ್ಲಿ ಪಾಲ್ಗೊಂಡು ಪ್ರಮಾಣಪತ್ರ ಸಲ್ಲಿಸಿವೆ. ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಸಿಬ್ಬಂದಿ ನೇಮಕ, ಪೋಷಕರಿಗೆ ಜಾಗೃತಿ, ಇಲಾಖೆ ಜೊತೆ ನಡೆಸಿದ ಸಂವಹನದ ಬಗ್ಗೆ ಮಾಹಿತಿ ನೀಡಿವೆ. ಈ ಅಭಿಯಾನಕ್ಕೆ 208 ಮಂದಿ ಬೆಂಬಲ ಸೂಚಿಸಿದ್ದಾರೆ.
ನಗರದ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಇನ್ನಷ್ಟು ಕಾಳಜಿ ವಹಿಸುವ ಅಗತ್ಯ ಇದೆ. ಇದಕ್ಕಾಗಿ ವೇದಿಕೆ ಆರಂಭಿಸಲಾಗಿದೆ. ಈ ಮೂಲಕ ನಗರದ ಖಾಸಗಿ ಶಾಲೆಗಳ ಮಾದರಿ ಸುರಕ್ಷತಾ ಕ್ರಮ, ಸಲಹೆ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳು ಸೇರಿದಂತೆ ವಿವಿಧ ವಿಷಯಗಳನ್ನು ಮುಕ್ತವಾಗಿ ಚರ್ಚಿಸಬಹುದು ಎಂದು ರವಿಚಂದರ್ ತಿಳಿಸಿದರು.
‘ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಪರಿಣಾಮಕಾರಿ ನೀತಿ ರೂಪಿಸುವ ಅಗತ್ಯ ಇದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಧಿಕಾರಿಗಳು, ಶಾಲಾ ಸಿಬ್ಬಂದಿ ಹಾಗೂ ಪೋಷಕರ ಜೊತೆಗೂಡಿ ಕಾರ್ಯನಿರ್ವಹಿಸಬೇಕು’ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಸ್ಕೂಲ್ನ ಅಜೇಶ್ ವೆಬ್ಸೈಟ್ನಲ್ಲಿ ಸಲಹೆ ನೀಡಿದ್ದಾರೆ. ಇದೇ ರೀತಿ ಹಲವರು ಸಲಹೆಗಳನ್ನು ನೀಡಿದ್ದಾರೆ.
www.nmsbengaluru.org ನಲ್ಲಿ ಆಸಕ್ತರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.