ಬೆಂಗಳೂರಿನ ಒಂದು ಸಮಾರಂಭದಲ್ಲಿ ಮಠಗಳ ಕುರಿತು ಚರ್ಚೆ ನಡೆದಿರುವುದು ಸ್ವಾಗತಾರ್ಹ. ಕೆಲವರು ಅಭಿಪ್ರಾಯಪಟ್ಟಂತೆ ಜಾತ್ರೆಗಳನ್ನು ಮಾಡುವ ಮಠಗಳು ಇವೆ, ಜಾತಿ ಸಂಘಟನೆಯಲ್ಲಿ ತೊಡಗಿರುವ ಮಠಗಳು ಕಾಣಸಿಗುತ್ತವೆ. ರಾಜಕಾರಣ ಕೇಂದ್ರಿತವಾದವುಗಳೂ ಗೋಚರಿಸುತ್ತಿವೆ. ಮೌಢ್ಯತೆ ಬಿತ್ತುವ ಕೇಂದ್ರಗಳು ಎಲ್ಲೆಡೆ ಇವೆ. ಅವುಗಳ ನಡುವೆ ಸಮಕಾಲೀನ ಸಮಸ್ಯೆಗಳನ್ನು ಎತ್ತಿಕೊಂಡು, ಅವುಗಳ ಪರಿಹಾರಕ್ಕೆ ಪ್ರಯತ್ನ ಮಾಡುವ ಮಠಗಳು ಕಾಣಬರುತ್ತಿವೆ. ಮಠಗಳು ಪ್ರಾಚೀನ; ಅವುಗಳಿಗೆ ಸಂಬಂಧಿಸಿದ ಚರ್ಚೆಗಳು ನಿರಂತರ. ಮಠ ವ್ಯವಸ್ಥೆಯನ್ನು ಸುಧಾರಿಸಲು ಹಾರ್ದಿಕವಾದ ಸಮಾಲೋಚನೆಗಳು ನಡೆಯಬೇಕಾಗುತ್ತದೆ. ಉತ್ತಮವಾದ ಸಲಹೆಗಳು ಯಾವೊತ್ತಿಗೂ ಸ್ವಾಗತಾರ್ಹ. ಮಠಗಳು ವ್ಯಾಪಾರೀಕರಣಕ್ಕೆ ಒಳಗಾಗುತ್ತಿವೆ ಎಂಬ ಗಂಭೀರವಾದ ಆರೋಪ ಕೇಳಿಬರುತ್ತಿದೆ. ವ್ಯಾಪಾರೀಕರಣ ಎಂಬುದನ್ನು ಯಾವ ನೆಲೆಯಲ್ಲಿ ಅರ್ಥೈಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ಬೇಕಾಗುತ್ತದೆ.
ಮಠಗಳ ದೈನಂದಿನ ನಿರ್ವಹಣೆಗೆ ಸರ್ಕಾರದಿಂದಾಗಲಿ, ಇತರ ಸಂಘ-ಸಂಸ್ಥೆಯಿಂದಾಗಲಿ ಸಹಕಾರ ಸಿಗುವುದಿಲ್ಲ. ಕಾರಣ ಸಾವಿರಾರು ನೌಕರರಿಗೆ ವೇತನ, ಇತ್ಯಾದಿಗಳ ವ್ಯವಸ್ಥೆಯನ್ನು ರೂಪಿಸುವಲ್ಲಿ ತಮ್ಮದೇ ಆದ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಬೇಕಾಗುತ್ತದೆ. ವಿವಿಧ ಶುಲ್ಕಗಳಿಂದ ವಸೂಲಾದ ಹಣವನ್ನು ಅದೇ ಸಂಸ್ಥೆಯ ನಿರ್ವಹಣೆಗೆ ಬಳಸಲಾಗುತ್ತದೆ. ಹಾಗೆ ನೋಡಿದರೆ ದೊಡ್ಡಪ್ರಮಾಣದಲ್ಲಿ ಸಂಸ್ಥೆಗಳನ್ನು ನಡೆಸುತ್ತಿರುವ ಎಲ್ಲ ಸಂಸ್ಥೆಗಳು ಸಾಲದಲ್ಲಿವೆ. ಬಡ್ಡಿಯನ್ನು ತುಂಬದಿದ್ದರೆ, ಸಂಸ್ಥೆಯು ತೊಂದರೆಯನ್ನು ತಂದುಕೊಳ್ಳುತ್ತದೆ. ಈ ಸಂಬಂಧ ಯಾರೂ ಬಂದು, ಮಠಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರ ನೀಡುವುದಿಲ್ಲ.
ಕೆಲವರು ಮಠಗಳನ್ನು ಟೀಕಿಸುವಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತಪಡಿಸಬಹುದಷ್ಟೇ. ಮಠ ವ್ಯವಸ್ಥೆಯನ್ನು ಟೀಕಿಸುವವರು ವ್ಯಾಪಾರೀಕರಣ ಇಲ್ಲದ ಸಂಸ್ಥೆಯನ್ನು ನಡೆಸಿ, ತೋರಿಸಲಿ. ಯಾವುದಾದರೊಂದು ಸಮಸ್ಯೆಯನ್ನು ಎತ್ತಿಕೊಂಡು ಪರಿಹಾರಕ್ಕೆ ಮುಂದಾಗಲಿ. ಒಂದು ಅಂಶವನ್ನು ಇಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ. ಮಠಗಳು ನಡೆಸುವ ಸಂಸ್ಥೆಗಳಲ್ಲಿನ ಶಿಸ್ತು, ಪ್ರಾಮಾಣಿಕತೆ, ಗುಣಮಟ್ಟ, ಪಾರದರ್ಶಕತೆ ಇತ್ಯಾದಿಗಳನ್ನು ಕುರಿತು ಪರಾಮರ್ಶೆ ನಡೆಯಲಿ. ಅದರಂತೆ ಸರ್ಕಾರ ನಡೆಸುತ್ತಿರುವ ಸಂಸ್ಥೆಗಳಲ್ಲಿನ ವ್ಯವಸ್ಥೆ ಮತ್ತು ಪಾರದರ್ಶಕತೆಯನ್ನು ಕುರಿತು ಚರ್ಚೆ ನಡೆಯಲಿ. ಹಾಗೆಂದು ನಾನು ಖಾಸಗೀಕರಣಕ್ಕೆ ಒತ್ತಾಸೆ ನೀಡುತ್ತೇನೆಂದು ಭಾವಿಸಬಾರದು. ಈ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡಬಹುದಾಗಿದೆ. ಎಲ್ಲಿ ಒಳ್ಳೆಯದಿದ್ದರೂ ಅದನ್ನು ಸ್ವೀಕರಿಸೋಣ.
ಮಠಗಳು ನಡೆಸುವ ಸಂಸ್ಥೆಗಳಲ್ಲಿ ಖುದ್ದು ಪರಿಶೀಲನೆ ಮತ್ತು ನಿರ್ವಹಣೆ ಮಾಡುವ ವ್ಯವಸ್ಥೆ ಇರುತ್ತದೆ. ನಮ್ಮ ಸಂಸ್ಥೆಯು ಇತ್ತೀಚೆಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಲ್ಲಿ ಕಡಿಮೆ ಸ್ಮರಣಶಕ್ತಿಯ ವಿದ್ಯಾರ್ಥಿಗಳನ್ನು ಶ್ರೀಮಠಕ್ಕೆ ಕರೆಸಿಕೊಂಡು, ಅವರಿಗೆಲ್ಲ ಹತ್ತು ದಿನಗಳ ಕಾಲ ವಿಶೇಷವಾದ ಬೋಧನೆ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು. ಭಾಗವಹಿಸಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ರಾಜ್ಯದಾದ್ಯಂತ ವಿಸ್ತರಿಸುವ ಆಲೋಚನೆಯಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿ ಆಂದೋಲನ ನಡೆಸಲಾಯಿತು. ಪರಿಸರ ಪ್ರೀತಿಯನ್ನು ತೋರಿಸಲು, ಪ್ರತಿ ಸಮಾರಂಭದಲ್ಲೂ ಗಿಡಗಳಿಗೆ ನೀರೆರೆಯುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ವಚನ ಕಮ್ಮಟ ಮೂಲಕ ಪ್ರತಿವರ್ಷ ಸುಮಾರು ಐವತ್ತು ಸಾವಿರ ವಿದ್ಯಾರ್ಥಿಗಳಿಗೆ ಅರಿವನ್ನು ನೀಡಲಾಗುತ್ತಿದೆ. ಸಾಮೂಹಿಕ ವಿವಾಹ, ಅಂತರ್ಜಾತಿ ವಿವಾಹ, ಅನಾಥಾಶ್ರಮ, ನಿತ್ಯದಾಸೋಹ, ವೃದ್ಧಾಶ್ರಮ, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ನಾಟಕ, ಸಂಗೀತ, ನೃತ್ಯ ಶಾಲೆಗಳನ್ನು ನಡೆಸುತ್ತ ಸಮಾಜಸೇವೆಗೆ ಒತ್ತಾಸೆಯನ್ನು ನೀಡಲಾಗುತ್ತಿದೆ.
ಕೆಲವೊಂದು ನ್ಯೂನತೆಗಳು ಇರಬಹುದು. ಅವನ್ನು ಹಂತಹಂತವಾಗಿ ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ಆದರೆ ಇಡೀ ವ್ಯವಸ್ಥೆಯು ಕೆಟ್ಟಿದೆಯೆಂದು ದೋಷಾರೋಪಣೆ ಮಾಡುವುದು ಕುಹಕತನವಲ್ಲದೆ ಮತ್ತೇನು? ಶಿಕ್ಷಣ ಮತ್ತು ಆಧ್ಯಾತ್ಮಿಕ ಸಮಾನತೆ ಸಾಧಿಸಬೇಕಾದ ಮಠಗಳು ರಾಜಕಾರಣ ಹಾಗೂ ಸಂಪತ್ತಿನ ಕ್ರೋಡೀಕರಣದೊಂದಿಗೆ ಜನವಿರೋಧಿಯಾದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಾನು ಮೊದಲಿನಿಂದಲೂ ಈ ಬಗ್ಗೆ ಪ್ರತಿಪಾದಿಸುತ್ತ ಬಂದಿದ್ದೇನೆ. ಇಂಥ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ, ಮಠ ಪರಂಪರೆಯು ಅನಾಹುತಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ. ಮಠಗಳು ಜಾತಿಗೆ ಸಂಬಂಧಿಸಿದವುಗಳಾಗಿದ್ದು, ಅವು ಜಾತಿಯನ್ನು ಮೀರಿ ಬೆಳೆಯಬೇಕಾಗಿದೆ ಎಂಬ ಸಲಹೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕುಲಕ್ಕೊಬ್ಬ ಕಾವಿಧಾರಿ ವಿಚಾರವನ್ನು ಕುರಿತು ಕಳೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು. ಯಾರು ಟೀಕಿಸುತ್ತಿದ್ದರೋ, ಅವರನ್ನೇ ಆಮಂತ್ರಿಸಿದಾಗ, ಅವರು ಭಾಗವಹಿಸಲು ಒಪ್ಪಲಿಲ್ಲ.
ಜಾತಿ ವ್ಯವಸ್ಥೆ ವಿರೋಧಿಸುವ ಮತ್ತು ವಿನಾಶಗೊಳಿಸುವ ಆಶಯದ ಮೀರಸಾಬಿಹಳ್ಳಿ ಶಿವಣ್ಣನಂಥವರು ಸ್ವವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು. ಜಾತಿ ವ್ಯವಸ್ಥೆ ಕುರಿತು ಮಾತನಾಡುವವರು, ಜಾತಿ ವ್ಯವಸ್ಥೆಯಿಂದ ಹೊರಗೆ ಬಂದಿದ್ದಾರೆಯೆ?
ಸರ್ಕಾರಿ ಅನುದಾನ ಬಿಡುಗಡೆ ಆಗುವುದಕ್ಕಿಂತ ಮುನ್ನ ಜಾತಿ ಸಂಘಟನೆ ಮತ್ತು ಜನಾಂಗ ಜಾಗೃತಿಯಲ್ಲಿ ಸಾಧಕರು ತೊಡಗಿದ್ದರು. ಆಮಿಷಗಳಿಗೆ ಅವಲಂಬಿಸುತ್ತ ಹೋದಂತೆ ಕೆಲವು ಸಾಧಕರ ವಿಚಾರ ಮತ್ತು ವರ್ತನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾದವು. ತಮಗೆ ಸರ್ಕಾರವನ್ನು ನಿಯಂತ್ರಿಸುವ ಶಕ್ತಿ ಇದೆ ಎಂದು ಭ್ರಮಿಸಲಾಯಿತು. ೫-೬ ಜನ ಸ್ವಾಮಿಗಳನ್ನು ಸೇರಿಸಿಕೊಂಡು ಸರ್ಕಾರಕ್ಕೆ ಬ್ಲ್ಯಾಕ್-ಮೇಲ್ ಮಾಡುವ ತಂತ್ರಗಳನ್ನು ರೂಪಿಸಲಾಯಿತು. ಇವರು ಸರ್ಕಾರವನ್ನು ನಿಯಂತ್ರಿಸುವ ಮಟ್ಟಕ್ಕೆ ಹೋದದ್ದು ದುರದೃಷ್ಟಕರ.
ಈ ನಿಟ್ಟಿನಲ್ಲಿ ಕಪ್ಪುಹಣ ಮತ್ತು ರಾಜಕಾರಣ ಎರಡೂ ಅಪಾಯವೆಂದು ಅರಿಯಬೇಕಾಗಿದೆ. ವಿವೇಕ ಮತ್ತು ವಿವೇಚನೆ ಕಳೆದುಕೊಂಡಾಗ ಹಣ ಆಧಾರಿತ ಮತ್ತು ಅಧಿಕಾರಕೇಂದ್ರಿತ ವ್ಯವಸ್ಥೆಯೊಂದಿಗೆ ಹೋಗುವ ಸ್ಥಿತಿಯನ್ನು ತಂದುಕೊಳ್ಳಲಾಗುತ್ತದೆ. ತಮಗೆ ತಾವೇ ಅಸಹಾಯಕತೆಯನ್ನು ತಂದುಕೊಳ್ಳುವ ದುಃಸ್ಥಿತಿ. ಸರ್ಕಾರ ಕೂಡ ಇಂಥವರಿಗೆ ನಿವೇಶನ ಮತ್ತು ಅನುದಾನ ನೀಡುತ್ತ ಸಮಾಧಾನಪಡಿಸುವ ವಿಧಾನವನ್ನು ಅನುಸರಿಸುತ್ತದೆ. ಅನುದಾನದಿಂದ ಮಠ ವ್ಯವಸ್ಥೆಯು ಮತ್ತಷ್ಟು ಚಲನಶೀಲತೆಗೆ ಒಳಗಾಗಬೇಕಿತ್ತು. ಸರ್ಕಾರ ಅನುದಾನವನ್ನು ಕೊಟ್ಟು, ಮಠಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಅನಪೇಕ್ಷಿತ ವಿದ್ಯಮಾನ, ರಾಜಕಾರಣಿಗಳ ಕೈಗೊಂಬೆಯಾಗಿ ಕುಣಿಯುವ ಧಾರ್ಮಿಕರು ಈ ಎರಡೂ ಅನಾರೋಗ್ಯಕರವೇ.
ಡಾ.ಎಲ್. ಹನುಮಂತಯ್ಯನವರ ಟೀಕೆಯಲ್ಲಿ ಸತ್ಯವಿದೆ. ಅವರ ಟೀಕೆಯನ್ನು ಮಠ ವ್ಯವಸ್ಥೆಯು ಒಪ್ಪಿಕೊಂಡು, ಸಂಘಟನೆ, ಆಧ್ಯಾತ್ಮಿಕ ಸಮಾನತೆ, ಶಿಕ್ಷಣದ ಕಡೆಗೆ ಒತ್ತು ನೀಡಬೇಕಾಗಿದೆ. ಸರ್ಕಾರವು ತಳಮೂಲದ ಮಠಗಳಿಗೆ ಅನುದಾನವನ್ನು ನೀಡಲಿ; ರಾಜಕಾರಣದ ದಾಳಗಳಿಂದ ದೂರವಿದ್ದು, ಆ ಮಠಗಳು ತಮ್ಮ ಬದ್ಧತೆಯನ್ನು ಕಾಪಾಡಿಕೊಳ್ಳಲಿ. ತಮ್ಮ ಎಂದಿನ ಹಾಸ್ಯದ ಜಾಡಿನಲ್ಲಿ ವಿಚಾರ ಸರಣಿಯನ್ನು ಹರಿಯಬಿಟ್ಟಿರುವ ಚಂಪಾ ಅವರು, ಮಠಗಳು ಹೇಗೆ ಪರಿವರ್ತನೆ ಆಗಬೇಕೆಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಪರಿಗಣಿಸಬಹುದಾದಲ್ಲಿ ಯಾವ ಸಾಹಿತಿಗಳನ್ನು ಯಾವ ಪಕ್ಷದ ವತಿಯಿಂದ ಚುನಾವಣೆಗೆ ನಿಲ್ಲಿಸಿ, ಅವರನ್ನು ಗೆಲ್ಲಿಸಿ, ಅವರಿಗೆ ಯಾವ ಸಚಿವ ಸ್ಥಾನ ಸಿಗಬೇಕೆಂಬುದರ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಏಕಪಕ್ಷೀಯ ಟೀಕೆಗಳು ಸಮತೋಲನ ಕಾಯ್ದುಕೊಳ್ಳುವುದಿಲ್ಲ.
ಸಾಹಿತಿಗಳು ಮತ್ತು ಸ್ವಾಮಿಗಳನ್ನು ಕೂಡಿಸಿಕೊಂಡು ಸಂವಾದ ಮಾಡಿದ್ದರೆ ಒಳ್ಳೆಯದಿತ್ತು. ವಿಚಾರವಂತರು ಎತ್ತುವ ಪ್ರಶ್ನೆಗಳಿಗೆ ಸ್ವಾಮಿಗಳಿಂದ ಉತ್ತರವನ್ನು ನಿರೀಕ್ಷಿಸಬಹುದು. ಮೊನ್ನೆ ನಡೆದ ವಿಚಾರಸಂಕಿರಣ ಯಾವ ವಿಚಾರವನ್ನು ಆಧರಿಸಿ ನಡೆಯಿತೋ ತಿಳಿಯದು. ಆಸಕ್ತ ಮಠಾಧೀಶರನ್ನು ಆಮಂತ್ರಿಸಿದ್ದರೆ ಚರ್ಚೆಗೆ ಮಹತ್ವ ಬರುತ್ತಿತ್ತು. ಉತ್ತಮ ಕಾರ್ಯಗಳಿಗೆ ಮತ್ತೆ ಮತ್ತೆ ಟೀಕೆಗಳು ಕೇಳಿಬರುವುದರಿಂದ ಅವು ಮತ್ತಷ್ಟು ಭದ್ರ ಆಗುತ್ತವೆ. ಜನವಿರೋಧಿ ಹಾಗೂ ಜೀವವಿರೋಧಿ ಆಗಿರುವ ಮಠಗಳು ಬೇಡ. ಜೀವಪರವಾದ ಮತ್ತು ಜನಪರವಾದ ಮಠಗಳು ಬೇಕು. ಈ ಬಗ್ಗೆ ಚಿಂತನೆ ನಡೆಯಲಿ; ಚರ್ಚೆ ಮುಂದುವರಿಯಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.