ಕಾರವಾರ: ಇಲ್ಲಿನ ನಾಗರಮಡಿ ಜಲಪಾತದಲ್ಲಿ ನೀರಿಗಿಳಿದು ಅಪಾಯಕ್ಕೆ ಸಿಲುಕಿಕೊಂಡಿದ್ದ ಗೋವಾದ ಮಡಗಾಂವ್ನ 10 ಮಂದಿ ಪ್ರವಾಸಿಗರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಚೆಂಡಿಯಾ ಬಳಿ ನಾಗರಮಡಿ ಜಲಪಾತ ವೀಕ್ಷಿಸಲು ಈ ಪ್ರವಾಸಿಗರ ತಂಡ ಬಂದಿತ್ತು. ಮಧ್ಯಾಹ್ನ ಎಲ್ಲರೂ ನೀರಿಗಿಳಿದಿದ್ದಾಗ ಗುಡ್ಡದ ಕಡೆಯಿಂದ ಏಕಾಏಕಿ ರಭಸವಾಗಿ ನೀರು ಬಂದಿತು. ಇದರಿಂದ ಎಲ್ಲರೂ ನೀರಿನ ಮಧ್ಯೆ ಸಿಲುಕಿಕೊಂಡರು.
ಈ ಬಗ್ಗೆ ಸ್ಥಳದಲ್ಲಿದ್ದ ಇತರರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕದ ದಳದವರು ಹಗ್ಗದ ಸಹಾಯದಿಂದ ಅವರನ್ನು ರಕ್ಷಿಸಿದರು.