16ನೇ ಲೋಕಸಭೆಗೆ 543 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಶೇಕಡಾ 66.38ರಷ್ಟು ಮತದಾನವಾಗಿರುವುದು ಹೊಸ ದಾಖಲೆ. ಇಂದಿರಾ ಗಾಂಧಿ ಹತ್ಯೆಯ ನಂತರ 8ನೇ ಲೋಕಸಭೆಗೆ 1984ರಲ್ಲಿ ನಡೆದ ಚುನಾವಣೆಯಲ್ಲಿ ಆಗಿದ್ದ ಶೇಕಡಾ 64.01 ರಷ್ಟು ಮತದಾನ ಪ್ರಮಾಣವನ್ನು ಇದು ಮೀರಿಸಿದೆ. 81.45 ಕೋಟಿ ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. 2009ರಲ್ಲಿ 15ನೇ ಲೋಕಸಭೆ ಚುನಾವಣೆಯಲ್ಲಾಗಿದ್ದ ಮತದಾನ ಪ್ರಮಾಣ ಶೇಕಡಾ 58.19.
ಮತದಾನದ ಬಗ್ಗೆ ಜಾಗೃತಿಗಾಗಿ ಅನೇಕ ಸಂಘ ಸಂಸ್ಥೆಗಳು, ಮಾಧ್ಯಮಗಳಲ್ಲದೆ ಚುನಾವಣಾ ಆಯೋಗವೂ ಈ ಬಾರಿ ದೊಡ್ಡ ಮಟ್ಟದಲ್ಲೇ ಪ್ರಚಾರಾಂದೋಲನ ಹಮ್ಮಿಕೊಂಡಿತ್ತು. ಮತದಾನ ಕುರಿತಂತೆ ಜಾಗೃತಿ ಮೂಡಿಸುವ ಆಯೋಗದ ಈ ಕ್ರಮ ನಿಜಕ್ಕೂ ಶ್ಲಾಘನೀಯ. ಆದರೆ ಎಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡುವಂತಹ ಕ್ರಮ ಮಾತ್ರ ಚುನಾವಣಾ ಆಯೋಗದ ವ್ಯಾಪ್ತಿಯನ್ನು ಮೀರಿದ್ದು ಎಂಬುದನ್ನು ಗಮನಿಸಬೇಕು. ಅದರಲ್ಲೂ ಮತ ಹಾಕುವ ಮೊದಲು ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ ಎಂಬಂತಹ ಸಂದೇಶಗಳಿದ್ದ ಚುನಾವಣಾ ಆಯೋಗದ ಪ್ರಚಾರ ಸಾಮಗ್ರಿಗಳು ಪ್ರಜಾತಂತ್ರದ ಆಶಯಗಳನ್ನೇ ಅಣಕಿಸುವಂತಹದ್ದಾಗಿದ್ದವು.
ಒಂಬತ್ತು ಹಂತಗಳಲ್ಲಿ ಐದು ವಾರಗಳ ಕಾಲ ನಡೆದ ಈ ಚುನಾವಣೆ, ಈವರೆಗೆ ನಡೆದ ಎಲ್ಲಾ ಚುನಾವಣೆಗಳಿಗಿಂತ ಸುದೀರ್ಘವಾದದ್ದು. ಇದರ ಮುಖ್ಯ ಉದ್ದೇಶ ಭದ್ರತೆ. ಈ ಕಾಳಜಿಯ ನಡುವೆಯೂ ಈ ಚುನಾವಣೆ ಪೂರ್ಣ ಹಿಂಸಾಚಾರ ಮುಕ್ತವಾಗಿರಲಿಲ್ಲ. ಆದರೆ ಇವೆಲ್ಲಾ ಸಣ್ಣಪುಟ್ಟ ಹಿಂಸಾಚಾರದ ಘಟನೆಗಳು ಎಂಬುದು ಸಮಾಧಾನಕರ. ಮತದಾನದ ಅಂತಿಮ ದಿನ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಹಾಗೂ ಟಿಎಂಸಿ ಕಾರ್ಯಕರ್ತರ ಮಧ್ಯೆ ನಡೆದ ಮಾರಾಮಾರಿಯಲ್ಲಿ 13 ಮಂದಿ ಗಾಯಗೊಂಡಂತಹ ಘಟನೆ ನಡೆದಿದೆ. ಹಾಗೆಯೇ ಛತ್ತೀಸಗಡ, ಜಾರ್ಖಂಡ್ ಹಾಗೂ ಒಡಿಶಾದಂತಹ ರಾಜ್ಯಗಳಲ್ಲಿ ಮಾವೊವಾದಿಗಳಿಂದ ಒಂದಿಷ್ಟು ವಿಧ್ವಂಸಕ ಕೃತ್ಯಗಳು ಹಾಗೂ ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಸಣ್ಣಪುಟ್ಟ ಹಿಂಸಾಚಾರ ಘಟನೆಗಳು ನಡೆದಿವೆ. ಚುನಾವಣೆಯ ಅವಧಿ ಇಷ್ಟೊಂದು ಸುದೀರ್ಘ ಕಾಲದ್ದಾಗಿರುವುದು ಅವಶ್ಯವೆ ಎಂಬ ಬಗ್ಗೆ ಮರುಅವಲೋಕನಕ್ಕೆ ಅವಕಾಶವಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಅನೇಕ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಆಯೋಗ ಕ್ರಮಗಳನ್ನು ಕೈಗೊಂಡಿದೆ. ಮತದಾನದ ಕಡೆಯ ದಿನವೂ ವಾರಾಣಸಿಯ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ ಕ್ರಮ ಕೈಗೊಳ್ಳಬೇಕಾಯಿತು. ಹಾಗೆಯೇ ವಾರಾಣಸಿಯಲ್ಲಿ ನರೇಂದ್ರ ಮೋದಿ ರ್ಯಾಲಿಗೆ ಅನುಮತಿ ನೀಡುವ ವಿಚಾರದಲ್ಲಿ ಸಂವಹನ ಕೊರತೆ ಉಂಟಾಗಿತ್ತು ಎಂಬುದನ್ನು ಚುನಾವಣಾ ಆಯೋಗವೇ ಒಪ್ಪಿಕೊಳ್ಳುವಂತಹ ಮುಜುಗರದ ಸ್ಥಿತಿ ಎದುರಾದದ್ದು ಮತ್ತೊಂದು ವಿಪರ್ಯಾಸ. ಈ ಬೆಳವಣಿಗೆಯ ನಂತರ ವಾರಾಣಸಿಯ ಚುನಾವಣಾ ಪ್ರಕ್ರಿಯೆ ಉಸ್ತುವಾರಿಗಾಗಿ ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಕುಮಾರ್ ಅವರನ್ನು ಕರೆಸಿಕೊಳ್ಳುವಂತಹ ವಿದ್ಯಮಾನ ನಡೆದಿದ್ದು ಇರಿಸುಮುರಿಸಿನ ಸಂಗತಿಯಾಗಿ ದಾಖಲಾಯಿತು.
‘ನೋಟಾ’ (ಮೇಲಿನವರು ಯಾರೂ ಅಲ್ಲ) ಚಲಾಯಿಸುವ ಹಕ್ಕನ್ನೂ ಒದಗಿಸಿದ್ದು ಈ ಚುನಾವಣೆಯ ಮತ್ತೊಂದು ವಿಶೇಷ. ಭೌಗೋಳಿಕವಾಗಿ ಬಹುದೊಡ್ಡದಾದ ಬಹುಸಂಸ್ಕೃತಿಯ ಭಾರತದಂತಹ ನಾಡಿನಲ್ಲಿ ನಿರ್ಭೀತವಾಗಿ ಮತ ಚಲಾಯಿಸುವ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯವಾಗಿದೆ ಎಂಬುದೇ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಂತಹದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.