ಬೆಂಗಳೂರು: ‘ದೇಶ ಸದೃಢಗೊಳ್ಳಲು ಕಡ್ಡಾಯ ಮತದಾನ ಕಾನೂನು ಜಾರಿಗೆ ತರಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು.
ಚುನಾವಣಾ ಆಯೋಗದ ವತಿಯಿಂದ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪತ್ರಿಕೆಗಳನ್ನು ಓದುವವರು ಹಾಗೂ ಟಿವಿ ನೋಡುವವರು ದೇಶದ ಬಗ್ಗೆ ಮಾತನಾಡುತ್ತಾರೆ. ಆದರೆ, ಮತ ಚಲಾಯಿಸುವುದಿಲ್ಲ. ಅನಕ್ಷರಸ್ಥರು ಶಿಸ್ತಿನಿಂದ ಮತ ಚಲಾಯಿಸುತ್ತಾರೆ. ಅವರು ರಾಜಕಾರಣಿಗಳ ಆಮಿಷಕ್ಕೆ ಒಳಗಾಗುತ್ತಾರೆ. ಹೀಗಾಗಿ ಉತ್ತಮ ವ್ಯಕ್ತಿಗಳು ಗೆಲ್ಲುವುದಿಲ್ಲ. ಮತದಾನ ಕಡ್ಡಾಯ ಮಾಡಿದರೆ ಪ್ರಾಮಾಣಿಕರು ಆರಿಸಿ ಬರುತ್ತಾರೆ ಎಂದರು.
ನಮ್ಮ ದೇಶದಲ್ಲಿ ಯುವಜನರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ದೇಶದ ಚಿತ್ರಣವನ್ನು ಬದಲಿಸುವ ಶಕ್ತಿ ಇದೆ. ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಬೇಕು ಎಂದರು.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಮಾತನಾಡಿ, ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಜನರು ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದೆ ಎಂದು ದೂರುತ್ತಾರೆ. ಇಂತಹ ಪ್ರವೃತ್ತಿ ಬಿಡಬೇಕು ಎಂದು ಹೇಳಿದರು.
ರಾಜ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ, ನಗರ ಜಿಲ್ಲಾಧಿಕಾರಿ ವಿ.ಶಂಕರ್ ಇದ್ದರು.