ಕೋಲ್ಕತ್ತ/ಕೊಚ್ಚಿ/ನವದೆಹಲಿ (ಪಿಟಿಐ): ‘ಮತಾಂತರ ಬೇಡ ಎನ್ನುವುದಾದರೆ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಗೆ ಬೆಂಬಲ ನೀಡಿ’ ಎಂದು ಆರ್ಎಸ್ಎಸ್, ವಿಎಚ್ಪಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಶನಿವಾರ ವಿರೋಧ ಪಕ್ಷಗಳಿಗೆ ಸವಾಲು ಹಾಕಿವೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ವಿಎಚ್ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೋಗಾಡಿಯಾ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ‘ಮತಾಂತರ ಕಾಯ್ದೆ ನಿಷೇಧ ಕಾಯ್ದೆ ಜಾರಿಗೆ ಸಿದ್ಧ’ ಎಂದು ಘೋಷಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಸ್ವರ್ಣ ಮಹೋತ್ಸವ ಅಂಗವಾಗಿ ಕೋಲ್ಕತ್ತದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮತಾಂತರ ಬೇಡ ಎನ್ನುವುದಾದರೆ ಹಿಂದೂಗಳನ್ನೂ ಮತಾಂತರ ಮಾಡಬೇಡಿ ಎಂದು ಅಲ್ಪಸಂಖ್ಯಾತರಿಗೆ ತಾಕೀತು ಮಾಡಿದರು.
ಅಲ್ಪಸಂಖ್ಯಾತರನ್ನು ಹಿಂದೂ ಧರ್ಮಕ್ಕೆ ಮರಳಿ ಮತಾಂತರ ಮಾಡುತ್ತಿರುವ ಸಂಘ ಪರಿವಾರದ ವಿವಾದಿತ ‘ಘರ್ ವಾಪಸಿ’ (ಮರಳಿ ಮನೆಗೆ) ಕಾರ್ಯಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಸಂಘ ಪರಿವಾರ ಮರು ಮತಾಂತರವನ್ನು ಬೆಂಬಲಿಸುತ್ತದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೂಗಳಿಂದಲೇ ಭಾರತ ಸುರಕ್ಷಿತ |
ರಾಷ್ಟ್ರ ವಿರೋಧಿಗಳು: ಆಗ್ರಾ ಮರು ಮತಾಂತರ ಕುರಿತು ಸಂಸತ್ನಲ್ಲಿ ವಿರೋಧಿಸುತ್ತಿರುವವರು ಹಿಂದೂ ಧರ್ಮ ಹಾಗೂ ಭಾರತದ ವಿರೋಧಿಗಳು ಎಂದು ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೋಗಾಡಿಯಾ ಆರೋಪಿಸಿದರು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಲ್ಲಿ ಅದನ್ನು ವಿಶ್ವ ಹಿಂದೂ ಪರಿಷತ್ ಬೆಂಬಲಿಸುವುದಾಗಿ ಅವರು ಘೋಷಿಸಿದರು.
ಅಮಿತ್ ಷಾ ಸವಾಲು: ಕೊಚ್ಚಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ‘ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಎನ್ಡಿಎ ಸರ್ಕಾರ ಸಿದ್ಧ. ಜಾತ್ಯತೀತರೆಂದು ಕರೆದುಕೊಳ್ಳುವವರು ಸರ್ಕಾರದ ಈ ನಿಲುವನ್ನು ಸಂಸತ್ನಲ್ಲಿ ಬೆಂಬಲಿಸಲಿ’ ಎಂದು ಸವಾಲು ಹಾಕಿದರು. ‘ಬಲವಂತದ ಮತಾಂತರದ ವಿರುದ್ಧ ಮೊದಲಿನಿಂದಲೂ ಬಿಜೆಪಿಯೊಂದೇ ಧ್ವನಿ ಎತ್ತುತ್ತಿರುವ ಏಕೈಕ ಪಕ್ಷ’ ಎಂದು ಅವರು ಸಮರ್ಥಿಸಿಕೊಂಡರು.
‘ಅನಗತ್ಯ ವಿಜೃಂಭಣೆ’: ಮತಾಂತರ ಹಾಗೂ ಉತ್ತಮ ಆಡಳಿತ ದಿನಾಚರಣೆಯಂತಹ ಸಣ್ಣಪುಟ್ಟ ವಿಷಯಗಳನ್ನು ವಿರೋಧ ಪಕ್ಷಗಳು ಅನಗತ್ಯವಾಗಿ ದೊಡ್ಡ ವಿವಾದವನ್ನಾಗಿ ಬಿಂಬಿಸುತ್ತಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.