ನವದೆಹಲಿ(ಐಎಎನ್ ಎಸ್): ಮತಾಂತರ ಕುರಿತ ಬಿಕ್ಕಟ್ಟು ರಾಜ್ಯಸಭೆಯಲ್ಲಿ ಗುರುವಾರವೂ ಮುಂದುವರಿದಿದ್ದು, ಸರ್ಕಾರ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.
ಸದನದಲ್ಲಿ ಸತತ ನಾಲ್ಕನೇ ದಿನವೂ ಮತಾಂತರ ಕುರಿತು ಗದ್ದಲ ನಡೆದಿದ್ದರಿಂದ ಕೆಲ ಕಾಲ ಕಲಾಪವನ್ನು ಮುಂದೂಡಲಾಯಿತು.
ಪ್ರಶ್ನೋತ್ತರ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು. ಪ್ರಧಾನಿ ಅವರು ಮತಾಂತರ ಕುರಿತ ನಮ್ಮ ಪ್ರಶ್ನೆಗಳನ್ನು ಆಲಿಸಬೇಕು ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದು ಗದ್ದಲ ಎಬ್ಬಿಸಿದವು.
ನಿಯಮ 267ರ ಅಡಿ ಮತಾಂತರ ಕುರಿತು ಚರ್ಚೆ ನಡೆಸಲು ಸಿದ್ಧರಿದ್ದೇವೆ. ಆದರೆ, ಚರ್ಚೆ ಹೇಗೆ ನಡೆಯಬೇಕು, ಯಾವಾಗ ನಡೆಯಬೇಕು, ಯಾರು ಉತ್ತರ ನೀಡಬೇಕು ಎಂಬುದನ್ನು ವಿರೋಧ ಪಕ್ಷಗಳು ನಿರ್ಧರಿಸುವುದು ಸೂಕ್ತವಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕ ಆನಂದ್ ಶರ್ಮ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸದೆ, ಹಠ ಸಾಧಿಸುತ್ತಿದೆ ಎಂದು ಆರೋಪಿಸಿದರು.