ನವದೆಹಲಿ (ಪಿಟಿಐ): ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಕಪ್ಪುಹಣ ವಾಪಸ್ ಹಾಗೂ ಉದ್ಯೋಗ ಸೃಷ್ಟಿಯಂತಹ ಮಹತ್ವದ ಭರವಸೆ ಮರೆತಿರುವ ಕೇಂದ್ರ ಸರ್ಕಾರ ಧಾರ್ಮಿಕ ಮತಾಂತರದಂತಹ ವಿವಾದಾತ್ಮಕ ವಿಷಯಗಳಿಗೆ ಆದ್ಯತೆ ನೀಡುತ್ತಿದೆ ಎಂದು ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಎನ್ಡಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡವು.
ನಿರೀಕ್ಷೆಯಂತೆ ಮರು ಮತಾಂತರ ವಿವಾದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತಲ್ಲದೇ, ಪ್ರಧಾನಿ ಹೇಳಿಕೆಗಾಗಿ ವಿರೋಧ ಪಕ್ಷಗಳು ಹಿಡಿದಿರುವ ಪಟ್ಟು ಸೋಮವಾರವೂ ಮುಂದುವರೆಯಿತು. ವಿರೋಧ ಪಕ್ಷಗಳು ಸುಗಮ ಕಲಾಪಗಳಿಗೆ ಅಡ್ಡಿ ಮಾಡುತ್ತಿವೆ ಎಂಬ ಆಡಳಿತ ಪಕ್ಷದ ಆರೋಪದಿಂದ ರೊಚ್ಚಿಗೆದ್ದ ವಿರೋಧ ಪಕ್ಷಗಳು ಸರ್ಕಾರಕ್ಕೆ ಉತ್ತರಿಸಲೂ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ಉಭಯ ಸದನಗಳ ಕಲಾಪವನ್ನು ಮೂರ್್ನಾಲ್ಕು ಬಾರಿ ಮುಂದೂಡಲಾಯಿತು.
ಸರ್ಕಾರದ ವಿರುದ್ಧ ಆಕರ್ಷಕ ಘೋಷಣೆಯುಳ್ಳ ಭಿತ್ತಿಪತ್ರಗಳನ್ನು ಹಿಡಿದ ಸಮಾಜವಾದಿ, ಜೆಡಿಯು ಹಾಗೂ ತೃಣಮೂಲ ಕಾಂಗ್ರೆಸ್ ಸಂಸದರು ರಾಜ್ಯಸಭೆಯ ಸಭಾಧ್ಯಕ್ಷರ ಪೀಠದತ್ತ ಧಾವಿಸಿ ಘೋಷಣೆ ಕೂಗಿದರು. ಲೋಕಸಭೆಯಲ್ಲೂ ಆರ್ಜೆಡಿ ಹಾಗೂ ಜೆಡಿಯು ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು.
ದೇಶದಲ್ಲಿ ಐದು ಕೋಟಿ ನಿರುದ್ಯೋಗಿಗಳಿದ್ದಾರೆ. ಕೇಂದ್ರ ಸರ್ಕಾರ ಇದುವರೆಗೂ ಒಂದೇ ಒಂದು ಉದ್ಯೋಗವನ್ನೂ ಸೃಷ್ಟಿಸಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ರಾಮಗೋಪಾಲ ಯಾದವ್ ತರಾಟೆಗೆ ತೆಗೆದುಕೊಂಡರು. ಸಿಪಿಎಂನ ಸೀತಾರಾಂ ಯೆಚೂರಿ, ಡಿಎಂಸಿಯ ಡೆರೆಕ್ ಓ’ಬ್ರಿಯೆನ್ ಎಸ್ಪಿ ಸಂಸದರ ಬೆಂಬಲಕ್ಕೆ ನಿಂತರು.
ಹಣಕಾಸು ಸಚಿವರಿಗೆ ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪುಹಣವನ್ನು ಮರಳಿ ತರಲು ಇದುವರೆಗೂ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಟಿಎಂಸಿ ಸದಸ್ಯರು, ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಸರ್ಕಾರ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯಸಭೆಯಲ್ಲಿ ದೆಹಲಿಯ ಅಕ್ರಮ ಕೊಳೆಗೇರಿಗಳನ್ನು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದ ಮಹತ್ವದ ತಿದ್ದುಪಡಿ ಮಸೂದೆ ಮಂಡನೆಗೆ ಮುಂದಾದ ವೆಂಕಯ್ಯ ನಾಯ್ಡು ಅವರಿಗೆ ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ. ಲೋಕಸಭೆಯ ಅಂಗೀಕಾರ ಪಡೆದಿರುವ ಈ ಮಸೂದೆ ಇದೇ ಡಿ.31ರೊಳಗೆ ರಾಜ್ಯಸಭೆಯ ಅನುಮೋದನೆ ಪಡೆಯಬೇಕಿದೆ.
ಮಾಂಸಖಂಡ ಹುರಿ
ಮತಾಂತರ, ಮರು ಮತಾಂತರದ ಹೆಸರಿನಲ್ಲಿ ಕೆಲವು ಸಂಘಟನೆಗಳು ಮಾಂಸಖಂಡಗಳನ್ನು ಹುರಿಗೊಳಿಸಿಕೊಳ್ಳುತ್ತಿವೆ.
– ಡಿ. ರಾಜಾ, ಸಿಪಿಐ ಸಂಸದ
ಗಮನ ಸೆಳೆದ ಫಲಕಗಳು
ಸಂಸತ್ ಉಭಯ ಸದನಗಳಲ್ಲಿ ಸೋಮವಾರ ಪ್ರತಿಭಟನೆಯಲ್ಲಿ ತೊಡಗಿದ್ದ ಸಮಾಜವಾದಿ ಪಕ್ಷದ ಸದಸ್ಯರ ಕೈಯಲ್ಲಿದ್ದ ಫಲಕಗಳಲ್ಲಿ ಕಂಡುಬಂದ ಆಕರ್ಷಕ ಘೋಷಣೆಗಳು ಎಲ್ಲರ ಗಮನ ಸೆಳೆದವು.
* ಗಾಂಧಿ ಹಮ್ ಶರ್ಮಿಂದಾ ಹೈ, ತೇರಾ ಖಾತಿಲ್ ಅಭಿ ಜಿಂದಾ ಹೈ (ಗಾಂಧಿ, ನಮಗೆ ನಾಚಿಕೆ ಆಗುತ್ತಿದೆ, ನಿಮ್ಮ ಕೊಲೆಗಡುಕರು ಇನ್ನೂ ಜೀವಂತ ಇದ್ದಾರೆ)
* ಘರ್ ವಾಪಸಿ ಬಂದ್ ಕರೋ, ಕಾಲಾಧನ್ ವಾಪಸ್ ಲಾವೋ
(ಮರು ಮತಾಂತರ ನಿಲ್ಲಿಸಿ, ಕಪ್ಪುಹಣ ಮರಳಿ ತನ್ನಿ)
* ವಾದಾ ಖಿಲಾಫಿ ಬಂದ್ ಕರೋ (ವಚನ ಭ್ರಷ್ಟರಾಗಬೇಡಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.