ಬೆಂಗಳೂರು: ‘ಕಾಡು ಕುದುರೆ ಓಡಿ ಬಂದಿತ್ತಾ... ಗೀತೆಯನ್ನು ಸುಬ್ಬಣ್ಣನವರು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನ್ಮಯರಾಗಿ ಹಾಡಿದರು. ಆಗ ಅವರನ್ನು ಖ್ಯಾತ ನಿರ್ದೇಶಕ ಕೆ.ಅಬ್ಬಾಸ್ ಸೇರಿದಂತೆ ಹಲವರು ಎದ್ದುಬಂದು ತಬ್ಬಿಕೊಂಡರು. ಕನ್ನಡ ಗೊತ್ತಿರದ ಅವರು ‘ಇಸ್ ಇಟ್ ಎ ಸಾಂಗ್ ಆನ್ ವೈಲ್ಡ್ ಹಾರ್ಸ್’ ಎಂದು ಕೇಳಿದರು. ಕೇವಲ ಹಾಡಿನ ನಾದ ಕೇಳಿ ಅರ್ಥಮಾಡಿಕೊಂಡಿದ್ದರು’
‘ಮದ್ರಾಸ್ನ ಸ್ಟುಡಿಯೊದಲ್ಲಿ ಈ ಗೀತೆಯನ್ನು ಹಾಡಲು ಸುಬ್ಬಣ್ಣ 13 ಅವಕಾಶ ತೆಗೆದುಕೊಂಡಿದ್ದರು. ಆಗಲೇ ಗ್ಯಾಲರಿ ತುಂಬಿ ಹೋಗಿತ್ತು. ಈ ಹಾಡಿಗೆ ಈಗಲೂ ಜನರನ್ನು ಸೆಳೆಯುವ ಅದ್ಭುತ ಶಕ್ತಿ ಇದೆ. ಇದು ನನ್ನ ನೆಚ್ಚಿನ ಗೀತೆ. ಜಾನಪದದಲ್ಲಿ ನಾದವೇ ಒಂದು ಘಟಕ. ಈ ನಾದಕ್ಕೆ ಒಂದು ಅದ್ಭುತ ಭಾಷೆ ಇದೆ’
– ‘ಕಾಡು ಕುದುರೆ ಓಡಿ ಬಂದಿತ್ತಾ...’ ಗೀತೆಯ ಜನಪ್ರಿಯತೆಯನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರು ಬಿಚ್ಚಿಟ್ಟಿದ್ದು ಹೀಗೆ.
ನಗರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಭಾನುವಾರ ಆಯೋಜಿಸಿದ್ದ ‘ಕವಿಯ ನೋಡಿ ಕವಿತೆ ಕೇಳಿ’ ಸರಣಿ ಕಾರ್ಯಕ್ರಮದಲ್ಲಿ ಅವರು ಹಲವು ನೆನಪುಗಳನ್ನು ಮೆಲುಕು ಹಾಕಿದರು. ಈ ಗೀತೆ ಹಾಡಿ ಕಿಕ್ಕಿರಿದ ಜನಸ್ತೋಮವನ್ನು ರಂಜಿಸಿದ್ದು ಗಾಯಕ ಶಿವಮೊಗ್ಗ ಸುಬ್ಬಣ್ಣ. ಆಗ ಮತ್ತೆ ಕಾಡು ಕುದುರೆ ಓಡಿಬಂದ ಅನುಭವ...!
ಕಂಬಾರರ ಮಾತುಗಳ ಜತೆಗೆ ಅವರು ರಚಿಸಿರುವ 12 ಕವಿತೆಗಳನ್ನು ಹೆಸರಾಂತ ಗಾಯಕರು ಪ್ರಸ್ತುತಪಡಿಸಿದರು. ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್ ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳು ಈ ವಿನೂತನ ಕಾರ್ಯಕ್ರಮಕ್ಕೆ ಕಿವಿಯಾದರು.
ಕವಿತೆಗಳ ಸೃಷ್ಟಿಗೆ ಕಾರಣವಾದ ಸನ್ನಿವೇಶ, ಅದರ ಆಶಯವನ್ನು ಕಂಬಾರರು ಮನೋಜ್ಞವಾಗಿ ಕಟ್ಟಿಕೊಟ್ಟರು. ‘ಪಕ್ಕ ವಾದ್ಯದ ಅಬ್ಬರದಿಂದಾಗಿ ಇಂದು ಭಾವಗೀತೆಯ ಭಾವವೇ ಕಳೆದು ಹೋಗುತ್ತಿದೆ. ಗೀತೆ ಹಾಗೂ ಅದರ ಅರ್ಥವನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಗೀತೆ ಮುಖ್ಯವಾಗಬೇಕೇ ಹೊರತು ಪಕ್ಕ ವಾದ್ಯದ ಅಬ್ಬರ ಅಲ್ಲ’ ಎಂದು ಅಭಿಪ್ರಾಯಪಟ್ಟರು.
ತಾವೇ ರಚಿಸಿರುವ ‘ಯಾಕೆ ತಂಗಿ ಹಿಂಗ್ಯಾಕೆ ಹಾರಾಡ್ತಿ ಪರಿ ಬಂದಾಗ ಆಡ್ತಿ’ ಹಾಗೂ ‘ಬಿಸಿಲು ಕುದುರೆಯನ್ನೇರಿ ಹೋದ...’ ಗೀತೆಯನ್ನು ಹಾಡಿದರು. ಆದರೆ, ಇದಕ್ಕೆ ಅವರು ಪಕ್ಕ ವಾದ್ಯದ ನೆರವು ಪಡೆಯಲಿಲ್ಲ.
‘ಏನು ಹೇಳಲಿ ಜನರ...’ ಗೀತೆಯನ್ನು ಗಾಯಕಿ ಕಸ್ತೂರಿ ಶಂಕರ್ ಹಾಡಿದರು. ‘ಕಾಂತನಿಲ್ಲದ ಮ್ಯಾಲೆ ಏಕಾಂತವೇತಕೆ? ಗಂಧ ಲೇಪನವೇತಕೆ ಈ ದೇಹಕೆ’ ಎಂಬ ಗೀತೆಯನ್ನು ಸಂಗೀತಾಕಟ್ಟಿ ಸುಶ್ರಾವ್ಯವಾಗಿ ಹಾಡಿ ಜೋರು ಚಪ್ಪಾಳೆ ಗಿಟ್ಟಿಸಿಕೊಂಡರು.
‘ಇವ ಯಾವ ಊರಿನ ಮಾವ ಈ ಚೆಲುವ’ ಗೀತೆಗೆ ಸುರೇಖಾ ಹೆಗ್ಡೆ ಧ್ವನಿಯಾದರು. ‘ಈ ಗೀತೆ ಎಷ್ಟು ಪ್ರಸಿದ್ಧಿ ಪಡೆದಿತ್ತು ಎಂದರೆ ಕ್ಲಬ್ಗಳಲ್ಲೂ ಹಾಡುತ್ತಿದ್ದರು’ ಎಂದು ಕಂಬಾರರು ನುಡಿದರು.
‘ಅವ ನೋಡ ಕೊಳಲೂದಿ ಕುಣಿಯುವ ಹುಡುಗ, ಹುಚ್ಚು ಕೆರಳಿಸತಾನ ಅಂಗಾಂಗದೊಳಗ’ ಎಂಬ ಗೀತೆಯನ್ನು ಹಾಡಿದ್ದು ಪೂರ್ಣಿಮಾ. ಈ ಹಾಡಿನ ತಾತ್ಪರ್ಯವನ್ನು ಕಂಬಾರರು ಸೊಗಸಾಗಿ ವಿವರಿಸಿದರು. ‘ಅಗಲಿ ಇರಲಾರೆನು, ಮರೆತು ಇರಲಾರೆನು ನಿನ್ನನ್ನ’ ಗೀತೆಯನ್ನು ಡಾ.ಜಯಶ್ರೀ ಕಂಬಾರ ಪ್ರಸ್ತುತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.