ಬೆಂಗಳೂರು: ರೆಸ್ಟ್ ಹೌಸ್ ರಸ್ತೆಯ ಸೈನಿಕರ ವಸತಿ ಸಮುಚ್ಚಯಕ್ಕೆ ನುಗ್ಗಿ ಶ್ರೀಗಂಧದ ಮರ ಕತ್ತರಿಸುತ್ತಿದ್ದ ಕಳ್ಳರು, ಸ್ಥಳಕ್ಕೆ ಬಂದ ಮೇಜರ್ ಭಾರದ್ವಾಜ್ (36) ಅವರ ಮೇಲೆ ಗರಗಸದಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಭಾನು ವಾರ ಬೆಳಗಿನ ಜಾವ ನಡೆದಿದೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಐದು ಅಡಿ ಎತ್ತರದ ತಡೆಗೋಡೆ ಜಿಗಿದು ಸಮುಚ್ಚಯದ ಆವರಣಕ್ಕೆ ನುಗ್ಗಿದ ಐದು ಮಂದಿ, ಗರಗಸದಿಂದ ಗಂಧದ ಮರ ಕತ್ತರಿಸಿದ್ದಾರೆ. ಮರ ತುಂಡಾಗಿ ಬಿದ್ದ ಶಬ್ದದಿಂದ ಎಚ್ಚರಗೊಂಡ ಭಾರದ್ವಾಜ್, ಬ್ಯಾಟರಿ ಹಿಡಿದು ಮನೆಯಿಂದ ಹೊರ ಬಂದಿದ್ದಾರೆ. ಅವರನ್ನು ಕಂಡ ಕೂಡಲೇ ಕಳ್ಳರು ಓಡಲಾರಂಭಿಸಿದ್ದಾರೆ.
ಭಾರದ್ವಾಜ್ ಅವರು ಕಳ್ಳರನ್ನು ಹಿಡಿಯಲು ಬೆನ್ನಟ್ಟಿದಾಗ ಗರಗಸದಿಂದ ತಲೆಗೆ ಹೊಡೆದ ಅವರು, ಕಾಂಪೌಂಡ್ ಜಿಗಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲೇ ಮನೆಗೆ ವಾಪಸಾದ ಭಾರದ್ವಾಜ್, ಮನೆಗೆಲಸ ಮಾಡುವ ರೋಸಯ್ಯನ ನೆರವಿನಿಂದ ಹತ್ತಿರದ ಖಾಸಗಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸೇನೆಯ ಕಮಾಂಡೊ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಮುಚ್ಚಯದ ಪ್ರವೇಶ ದ್ವಾರದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಇದೆ. ಅದರಿಂದ ಯಾವುದೇ ಸುಳಿವು ಲಭ್ಯವಾಗಿಲ್ಲ. ಕಳ್ಳರು ತಮಿಳು ಭಾಷೆ ಯಲ್ಲಿ ಮಾತನಾಡುತ್ತಿದ್ದರು ಎಂದು ಭಾರದ್ವಾಜ್ ಹೇಳಿಕೆ ಕೊಟ್ಟಿದ್ದಾರೆ. ಘಟನೆ ಸಂಬಂಧ ಕೊಲೆ ಯತ್ನ (ಐಪಿಸಿ 307) ಹಾಗೂ ಡಕಾಯಿತಿ (ಐಪಿಸಿ 397) ಆರೋಪದಡಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಕಬ್ಬನ್ಪಾರ್ಕ್ ಪೊಲೀಸರು ಮಾಹಿತಿ ನೀಡಿದರು.
‘ಶುಕ್ರವಾರ ರಾತ್ರಿಯಷ್ಟೇ ಮಲ್ಲೇಶ್ವ ರದ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಆವರಣದಲ್ಲಿ ಗಂಧದ ಮರ ಕಳವಿಗೆ ಯತ್ನ ನಡೆದಿತ್ತು. ಅಲ್ಲಿ ಕೃತ್ಯಕ್ಕೆ ಯತ್ನಿಸಿದ್ದವರೇ ಇಲ್ಲಿಯೂ ಕಳವಿಗೆ ಬಂದಿರುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ಸಿಬ್ಬಂದಿಯ ತಂಡ ವನ್ನು ತಮಿಳುನಾಡಿಗೆ ಕಳುಹಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.