ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕಿರಣ್ (20) ಎಂಬ ಯುವಕ, ನಿದ್ರೆಯ ಮಂಪರಿನಲ್ಲಿ ಕಿಟಕಿಯಿಂದ ತಲೆ ಹೊರ ಹಾಕಿದಾಗ ಮತ್ತೊಂದು ಬಸ್ ಉಜ್ಜಿಕೊಂಡು ಹೋಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಪೂಜಿ ನಗರದಲ್ಲಿ ಗುರುವಾರ ನಡೆದಿದೆ.
ಮೂಲತಃ ರಾಮನಗರ ಜಿಲ್ಲೆ ಗದಗಯ್ಯನದೊಡ್ಡಿ ಗ್ರಾಮದ ಕಿರಣ್, ಬೆಳಿಗ್ಗೆ 11 ಗಂಟೆ ಸುಮಾರಿಗೆ ತರಕಾರಿ ತರಲು ಬಸ್ನಲ್ಲಿ ಕೆ.ಆರ್.ಮಾರುಕಟ್ಟೆಗೆ ಹೋಗುತ್ತಿದ್ದರು. ಕಿಟಕಿ ಪಕ್ಕದಲ್ಲಿ ಕುಳಿತು ನಿದ್ರೆ ಮಾಡುತ್ತಿದ್ದ ಅವರು, ಮಂಪರಿನಲ್ಲಿ ತಲೆಯನ್ನು ಹೊರ ಹಾಕಿದ್ದಾರೆ.
ಆಗ, ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ (ಮಾರ್ಗ ಸಂಖ್ಯೆ 248), ಅವರ ತಲೆಯನ್ನು ಉಜ್ಜಿಕೊಂಡು ಮುಂದೆ ಸಾಗಿತು. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಅಸಹಜ ಸಾವು (ಐಪಿಸಿ 174) ಪ್ರಕರಣ ದಾಖಲಾಗಿದೆ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ಹೇಳಿದ್ದಾರೆ.
ಬೈಕ್ ಡಿಕ್ಕಿ: ಮಹಿಳೆ ಸಾವು: ಬನಶಂಕರಿ ಸಮೀಪದ ಸೀತಾ ಸರ್ಕಲ್ನಲ್ಲಿ ಶುಕ್ರವಾರ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಎಂ.ಮಂಜುಳಾ (32) ಎಂಬುವರು ಮೃತಪಟ್ಟಿದ್ದಾರೆ.
ಬೃಂದಾವನನಗರ ನಿವಾಸಿಯಾದ ಮಂಜುಳಾ, ಸೀತಾ ಸರ್ಕಲ್ ಸಮೀಪದ ವಿನಾಯಕ ಆಸ್ಪತ್ರೆಯಲ್ಲಿ ಉದ್ಯೋಗಿ ಯಾಗಿದ್ದರು. ಬೆಳಿಗ್ಗೆ 9.15ರ ಸುಮಾರಿಗೆ ಕೆಲಸಕ್ಕೆ ಹೊರಟಿದ್ದ ಅವರು, ಸೀತಾ ಸರ್ಕಲ್ ಬಳಿ ಬಸ್ ಇಳಿದು ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆಯಿತು.
ಕೆಳಗೆ ಬಿದ್ದ ಮಂಜುಳಾ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿತು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊ ಯ್ದರು. ಆದರೆ, ಮಾರ್ಗಮಧ್ಯೆಯೇ ಮಂಜುಳಾ ಕೊನೆಯುಸಿರೆಳೆದರು. ಬೈಕ್ ಸವಾರ ಬಾಲಾಜಿ (24) ಎಂಬಾತನನ್ನು ಬನಶಂಕರಿ ಸಂಚಾರ ಪೊಲೀಸರು ಬಂಧಿಸಿದ್ದಾರೆ.