ಮದ್ದೂರು: - ಎಚ್1–-ಎನ್1 ಸೋಂಕಿ-ನಿಂದ ಇಲ್ಲಿಗೆ ಸಮೀಪದ ರಾಂಪುರ ಗ್ರಾಮದಲ್ಲಿ ರೈತ ರಮೇಶ್ (45) ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ರಮೇಶ್ ಅವರಿಗೆ 15 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತು. ಅವರನ್ನು ಮಂಡ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ 8 ದಿನಗಳ ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗುರುವಾರ ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ರಮೇಶ್ ಕೊನೆಯುಸಿರೆಳೆದರು. ಅವರಿಗೆ ಎಚ್ 1-ಎನ್ 1 ಸೋಂಕು ತಗುಲಿತ್ತು ಎಂದು ಆಸ್ಪತ್ರೆ ವೈದ್ಯರು ದೃಢೀಕರಿಸಿದ್ದಾರೆ.
ಗ್ರಾಮದಲ್ಲಿ ಇದೀಗ ರೈತ ರಮೇಶ್ ಸಾವಿನಿಂದಾಗಿ ಆತಂಕದ ವಾತಾವರಣ ಕವಿದಿದೆ. ಗ್ರಾಮಕ್ಕೆ ತಾಲ್ಲೂಕು ಪಂಚಾಯಿತಿ ಸದಸ್ಯ ಸಂದರ್ಶ, ತಹಶೀಲ್ದಾರ್ ಮಂಜೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಿರಂಜನ್ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಎಚ್1-–ಎನ್1 ಸೋಂಕು ಎಲ್ಲೆಡೆ ವ್ಯಾಪಿಸಿದೆ. ಕೂಡಲೇ ಚರಂಡಿಗಳ ಶುಚಿಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.