ಬೆಂಗಳೂರು: ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನಿಂದ ಕಾದಿದ್ದ ನೆಲಕ್ಕೆ ಸಂಜೆ ವರುಣನ ಸ್ಪರ್ಶವಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಡಿನಲ್ಲಿದ್ದವರು ನಿರಾಸೆಗೊಳಗಾದರು. ಕೆಲ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಖರೀದಿಗೆಂದು ಮಾರುಕಟ್ಟೆಗೆ ಬಂದವರು ಬೇಗನೇ ಮನೆಗೆ ವಾಪಸಾದರು. ಹವಾಮಾನ ಇಲಾಖೆಯ ಪ್ರಕಾರ ರಾತ್ರಿ 8.30ರ ವೇಳೆಗೆ ನಗರದಲ್ಲಿ 7.5 ಮಿ.ಮೀ ಮಳೆಯಾಗಿತ್ತು. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 5.5 ಮಿ.ಮೀ ಹಾಗೂ ಯಲಹಂಕದಲ್ಲಿ 9 ಮಿ.ಮೀ ಮಳೆ ದಾಖಲಾಗಿತ್ತು.
ಟುಸ್ಸೆಂದ ಪಟಾಕಿ: ಹಬ್ಬದ ಸಡಗರಕ್ಕಾಗಿ ಪಟಾಕಿ ಖರೀದಿಸಿದವರು ಬುಧವಾರ ರಾತ್ರಿ ಅವುಗಳನ್ನು ಸಿಡಿಸಬೇಕೆನ್ನುವ ವೇಳೆಗೆ ಜೋರಾಗಿ ನಗರದ ಎಲ್ಲೆಡೆದ ಸುರಿದ ಮಳೆ ಪಟಾಕಿ ಸುಡುವ ಸಂಭ್ರಮಕ್ಕೆ ತಣ್ಣೀರು ಎರಚಿತು. ಪರಿಣಾಮ, ಮಳೆ ನಿಂತಾಗ ಅಲ್ಲಲ್ಲಿ ಪಟಾಕಿ ಸಿಡಿಸಿದ ಸಣ್ಣಪುಟ್ಟ ಸದ್ದುಗಳು ಕೇಳಿಬಂದವು.
‘ನಗರದಲ್ಲಿ ಬುಧವಾರ 18.1 ಮಿ.ಮೀ ಮಳೆಯಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.