ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2 ಜಿ ತರಂಗಾಂತರ ಮತ್ತು ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ ಹಗರಣಗಳಿಗೆ ತಾನು ಕಾರಣನಲ್ಲ ಎಂದು ನುಣುಚಿಕೊಳ್ಳುವಂತೆಯೇ ಇಲ್ಲ ಎಂದು ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್ ರಾಯ್ ಹೇಳಿದ್ದಾರೆ.
‘2 ಜಿ ತರಂಗಾಂತರ ಮಂಜೂರಾತಿ ಸಂದರ್ಭದಲ್ಲಿ ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಅವರು ಪ್ರತಿಯೊಂದು ಪತ್ರವನ್ನೂ ಮನಮೋಹನ್ ಅವರಿಗೇ ಬರೆದಿದ್ದರು. ರಾಜಾ ಅವರ ಪ್ರತಿ ಪತ್ರಕ್ಕೂ ಮನಮೋಹನ್ ಅವರು ಪ್ರತ್ಯುತ್ತರ ನೀಡಿದ್ದಾರೆ. ಅದೇ ಸಂದರ್ಭದಲ್ಲಿ ನಾನು ಕೂಡ ಅವರಿಗೆ ಎಷ್ಟೊಂದು ಪತ್ರಗಳನ್ನು ಬರೆದಿದ್ದೆ. ಆದರೆ ನನ್ನ ಒಂದು ಪತ್ರಕ್ಕಾದರೂ ಅವರಿಂದ ಪ್ರತಿಕ್ರಿಯೆ ಬರಲಿಲ್ಲ’ ಎಂದು ಇಂಗ್ಲಿಷ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘2 ಜಿ ಪ್ರಕರಣದಲ್ಲಿ ಸರ್ಕಾರದ ತಪ್ಪು ನಿರ್ಧಾರದಿಂದಾಗಿ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ’ ಎಂದು ನಾನು ಅಂದಾಜಿಸಿದ್ದೆ. ‘ಆದರೆ ಇದು ನಷ್ಟ ಅಂದಾಜಿಸುವ ಸರಿಯಾದ ವಿಧಾನ ಅಲ್ಲ’ ಎಂದು ನನಗೇ ನೇರವಾಗಿ ಹೇಳಿದ್ದರು. ಆಗ ನಾನು, ಹೀಗೆ ಲೆಕ್ಕ ವಿಧಾನವನ್ನು ನಮಗೆಲ್ಲಾ ಕಲಿಸಿದವರೇ ನೀವು ಎಂದು ಅವರಿಗೆ ಹೇಳಿದ್ದೆ’ ಎಂದು ರಾಯ್ ತಿಳಿಸಿದ್ದಾರೆ.