ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೂಡ ಪ್ರಶ್ನಿಸುವಂತೆ ವಿಚಾರಣಾ ನ್ಯಾಯಾಲಯ ಮಂಗಳವಾರ ಸಿಬಿಐಗೆ ಆದೇಶಿಸಿದೆ.
2005ರಲ್ಲಿ ಕಲ್ಲಿದ್ದಲು ಖಾತೆಯನ್ನೂ ಹೊಂದಿದ್ದ ಪ್ರಧಾನಿ ಮನಮೋಹನ್ ಸಿಂಗ್ ಒಡಿಶಾದ ತಲಬಿರಾ ಎರಡನೇ ಕಲ್ಲಿದ್ದಲು ನಿಕ್ಷೇಪವನ್ನು ಕುಮಾರ ಮಂಗಲಂ ಬಿರ್ಲಾ ಒಡೆತನದ ಹಿಂಡಾಲ್ಕೊ ಕಂಪೆನಿಗೆ ವಹಿಸಿದ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ನ್ಯಾಯಾಲಯಕ್ಕೆ ಪರಿಸಮಾಪ್ತಿ ವರದಿ ಸಲ್ಲಿಸಿತು.
ಆದರೆ, ಇದನ್ನು ಒಪ್ಪದ ನ್ಯಾಯಾಲಯ ಪ್ರಕರಣದ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹೇಳಿ ಸಿಬಿಐ ಸಲ್ಲಿಸಿದ್ದ ಪರಿಸಮಾಪ್ತಿ ವರದಿಯನ್ನು ತಿರಸ್ಕರಿಸಿತು. ಅಲ್ಲದೇ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಮರಳಿ ಸಿಬಿಐಗೆ ವಹಿಸಿತು.
ಸಿಬಿಐ ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶ ಭರತ್ ಪರಾಶರ್, ಮರು ತನಿಖೆ ಆರಂಭಿಸುವ ಮುನ್ನ ಅಂದಿನ ಕಲ್ಲಿದ್ದಲು ಸಚಿವರನ್ನು (ಮನಮೋಹನ್ ಸಿಂಗ್) ಮೊದಲು ವಿಚಾರಣೆಗೆ ಒಳಪಡಿಸಿ ಎಂದು ಸಲಹೆ ನೀಡಿದರು.