ಬಿಹಾರದ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರು ದೇವಾಲಯವೊಂದಕ್ಕೆ ಭೇಟಿ ನೀಡಿದ ನಂತರ ಆ ದೇವಾಲಯವನ್ನು ಶುದ್ಧೀಕರಿಸಿದ ಸಂಗತಿಯನ್ನು ಓದಿ ನೋವಾಯಿತು(ಪ್ರ.ವಾ. ಸೆ.30). ಅವರು ದಲಿತರೆಂಬ ಕಾರಣಕ್ಕಾಗಿಯೇ ಈ ಶುದ್ಧೀಕರಣದ ಕ್ರಿಯೆ ನಡೆದಿರುವುದು ಸ್ಪಷ್ಟ. ರಾಜ್ಯವೊಂದರ ಮುಖ್ಯಮಂತ್ರಿಗಳಿಗೆ ಈ ಗತಿಯಾದರೆ ಇನ್ನು ಸಾಮಾನ್ಯ ದಲಿತರ ಪಾಡೇನು? ಸ್ವಾತಂತ್ರ್ಯ ಬಂದು, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಂಡು ಆರೇಳು ದಶಕಗಳಾಗುತ್ತ ಬಂದರೂ ಜಾತಿ ಆಧಾರಿತ ಭೇದಭಾವ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ಶೋಚನೀಯ.
ಈ ಹಿಂದೆ ನಮ್ಮ ದೇಶದ ರಕ್ಷಣಾ ಮಂತ್ರಿಗಳಾಗಿದ್ದ ದಿವಂಗತ ಬಾಬು ಜಗಜೀವನ್ರಾಂ ಅವರು ಕಾಶಿಯಲ್ಲಿ ಯೋಗಿಯೊಬ್ಬರ ಪುತ್ಥಳಿಯೊಂದನ್ನು ಸ್ಪರ್ಶಿಸಿ ಉದ್ಘಾಟನೆ ಮಾಡಿಬಂದ ನಂತರ ಪುರೋಹಿತರು ಗಂಗಾಜಲದಿಂದ ಆ ಮೂರ್ತಿಯನ್ನು ಶುದ್ಧೀಕರಿಸಿ, ಅಸ್ಪೃಶ್ಯತೆ ಆಚರಿಸಿದ ಸಂಗತಿ ದೊಡ್ಡ ಸುದ್ದಿಯಾಗಿ ಕೋಲಾಹಲಕ್ಕೆ ಕಾರಣವಾಗಿತ್ತು.
ಇತ್ತೀಚಿಗೆ ದಲಿತ ಹುಡುಗನೊಬ್ಬ ಕೈಗೆ ವಾಚು ಕಟ್ಟಿಕೊಂಡು ಶಾಲೆಗೆ ಹೋದರೆ ಅದನ್ನು ಸಹಿಸದೆ ಆತನ ಕೈಯನ್ನೇ ಕತ್ತರಿಸಲಾಯಿತು. ಇಂಥ ದುಷ್ಟ ಕೃತ್ಯಗಳು ಮರುಕಳಿಸುತ್ತಲೇ ಇವೆ. ಇದಕ್ಕೆ ಕಾರಣ ಮನಸ್ಸಿನ ಮಾಲಿನ್ಯ. ಸಹಮಾನವರನ್ನು ತನ್ನಂತೆ ಬಗೆಯದೆ ಜಾತಿ ಕಾರಣಕ್ಕಾಗಿ ಕೀಳಾಗಿ ಕಾಣುವುದು, ಅಸ್ಪೃಶ್ಯತೆ ಆಚರಿಸುವುದು ಖಂಡನೀಯ.
ತಳಸಮುದಾಯದವರನ್ನು ಕೀಳಾಗಿ ಕಂಡು ಅವರನ್ನು ಅವಮಾನಿಸುವುದು, ಅವರಿಗೆ ಸಾಮಾಜಿಕ, ಧಾರ್ಮಿಕ ಹಕ್ಕು ಸವಲತ್ತುಗಳು ದೊರಕದಂತೆ ಸಂಚು ರೂಪಿಸುವುದು ಅತ್ಯಂತ ಹೇಯ. ಇದು ದೇಶ ಹಿನ್ನೆಡೆಗೆ ಸರಿಯುತ್ತಿರುವುದರ ಸೂಚನೆ. ಜಾಗತೀಕರಣದ ಇಂದಿನ ಆಧುನಿಕ ಸಮಾಜದಲ್ಲಿ ಅಸ್ಪೃಶ್ಯತೆಯಂಥ ದುಷ್ಟ ಆಚರಣೆಗಳು ಚಾಲ್ತಿಯಲ್ಲಿರುವುದು ತಲೆತಗ್ಗಿಸುವ ಸಂಗತಿಯಾಗಿದೆ. ಎಲ್ಲಿಯವರೆಗೆ ತಳಸಂಸ್ಕೃತಿಯ ಜನರನ್ನು ಪ್ರೀತಿ, ಮಮತೆಯಿಂದ ಎದೆಗೆ ಅಪ್ಪಿಕೊಂಡು ಅವರಿಗೆ ನೀಡಬೇಕಾದ ಹಕ್ಕು, -ಸವಲತ್ತು, ಘನತೆ– ಗೌರವವನ್ನು ನೀಡುವುದಿಲ್ಲವೋ ಅಲ್ಲಿಯವರೆಗೆ ಭಾರತ ಪ್ರಕಾಶಿಸಲು ಸಾಧ್ಯವಿಲ್ಲ.