ಮುಂಬೈ (ಪಿಟಿಐ): ಬಹುತೇಕ ಅತ್ಯಾಚಾರಗಳು ಮನೆಗಳಲ್ಲಿ ನಡೆಯುತ್ತಿದ್ದು, ಪ್ರತಿ ಮನೆಗೂ ಪೊಲೀಸರನ್ನು ನಿಯೋಜಿಸಲಾಗದು ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್ ವಿವಾದಿತ ಹೇಳಿಕೆ ನೀಡಿ, ಭಾರಿ ಟೀಕೆಗೆ ಗುರಿಯಾಗಿದ್ದಾರೆ.
ಬದಾಯೂಂ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಹುಯಿಲೆಬ್ಬಿಸಿರುವಾಗ, ಬುಧವಾರ ವಿಧಾನ ಪರಿಷತ್ನಲ್ಲಿ ನಡೆದ ಮಹಿಳೆಯರು ಮತ್ತು ದಲಿತರ ಮೇಲಿನ ಅಪರಾಧಗಳ ಚರ್ಚೆಯಲ್ಲಿ ಸಚಿವರು ಉತ್ತರಿಸಿದರು.
ಅತ್ಯಾಚಾರಗಳಲ್ಲಿ ಶೇ 40ರಷ್ಟು ತಿಳಿದವರಿಂದಲೇ, ಶೇ 6.34ರಷ್ಟು ತಂದೆ ಅಥವಾ ಸಹೋದರರಿಂದ, ಶೇ 6.65ರಷ್ಟು ಹತ್ತಿರದ ಸಂಬಂಧಿಗಳಿಂದ ಹಾಗೂ ಶೇ 40ರಷ್ಟು ಮದುವೆಯ ಭರವಸೆ ಮೇಲೆ ನಡೆಯುತ್ತಿದೆ ಎಂದು ಅವರು ಅಂಕಿ–ಅಂಶಗಳನ್ನು ನೀಡಿದರು.
‘ನೈತಿಕ ಮೌಲ್ಯಗಳು ಕುಸಿದಿರುವ ಕಾರಣ ಅತ್ಯಾಚಾರದಂತಹ ಅಪರಾಧಗಳು ನಡೆಯುತ್ತಿವೆ’ ಎಂದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣ ಕಡಿಮೆ ಇವೆ ಎಂದರು.
ಪಾಟೀಲ್ ಹೇಳಿಕೆಗೆ ವಿರೋಧಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಮಹಾರಾಷ್ಟ್ರ ವಿಧಾನ ಪರಿಷತ್ನ ಬಿಜೆಪಿ ನಾಯಕ ವಿನೋದ್ ತಾವ್ಡೆ ಅವರು, ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಸಚಿವರು ವಿಫಲರಾಗಿರುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
‘ಪ್ರತಿ ಮನೆಗೆ ಪೊಲೀಸರನ್ನು ನೇಮಿಸಬೇಕಿಲ್ಲ. ಒಬ್ಬ ಪೊಲೀಸ್ಗೆ 10 ಸಾವಿರ ಜನರನ್ನು ನಿಯಂತ್ರಿಸುವ ಸಾಮರ್ಥ್ಯ ನೀಡುವುದು ಗೃಹ ಸಚಿವರ ಕೆಲಸ. ಮಹಾರಾಷ್ಟ್ರ ಪೊಲೀಸರ ಮೇಲೆ ಇಂತಹ ಹೊಣೆ ಇದ್ದು, ಆದರೆ ಈಗಿನ ಗೃಹ ಸಚಿವರು ಅಧಿಕಾರ ವಹಿಸಿಕೊಂಡ ನಂತರ ಆ ಸ್ಥಿತಿ ಇಲ್ಲ‘ ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ಲೋಕಸಭಾ ಸದಸ್ಯೆ ಪೂನಂ ಮಹಾಜನ್ ಅವರೂ ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್–ಎನ್ಸಿಪಿ ಸರ್ಕಾರ ಇರುವಷ್ಟು ದಿನ ಮಹಿಳೆಯರ ಮೇಲಿನ ಅಪರಾಧಗಳು ನಿಲ್ಲುವುದಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ನಾಲ್ಕು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆದು ಹೊಸ ಸರ್ಕಾರ ಬಂದಾಗ ಮಹಿಳೆಯರ ಸುರಕ್ಷತೆ ಸರ್ಕಾರದ ಆದ್ಯತೆ ಆಗಲಿದೆ ಎಂದಿದ್ದಾರೆ.
ಪ್ರತಿಪಕ್ಷಗಳ ಟೀಕೆಗೆ ನಂತರ ಸುದ್ದಿಗಾರರ ಜೊತೆ ಮಾತನಾಡಿ ಉತ್ತರಿಸಿರುವ ಪಾಟೀಲ್, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರವು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದ್ದು ಇದು ಮುಂದುವರಿಯಲಿದೆ ಎಂದು ಹೇಳಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಬದ್ಧವಾಗಿದ್ದು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.